ಶಬರಿಮಲೆಯಲ್ಲಿ ಬುಧವಾರದಿಂದ ಮೊಳಗಲಿದೆ ಕನ್ನಡ ಭಕ್ತಿಗೀತೆಗಳು
ಶಬರಿಮಲೆ ದೇಶದ ಎಲ್ಲಾ ಭಾಗಗಳಿಂದಲೂ ಭಕ್ತರನ್ನು ಸೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ನಡೆಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ ತಿಳಿಸಿದೆ.
ಇನ್ನು ಮುಂದೆ ಮುಂಜಾನೆ ಗರ್ಭ ಗುಡಿ ತೆರೆಯುವಾಗ ಮತ್ತು ಸಂಜೆ ದೇವಸ್ಥಾನ ಮುಚ್ಚುವಾಗ ಮಲೆಯಾಳಂ ಮತ್ತು ಸಂಸ್ಕೃತ ಗೀತೆಯೊಂದಿಗೆ ಕನ್ನಡ, ಹಿಂದಿ, ತೆಲಗು ಮತ್ತು ತಮಿಳು ಭಕ್ತಿ ಗೀತೆಗಳನ್ನು ಪ್ರಸಾರ ಮಾಡಲಾಗುವುದು. ಹಲವಾರು ದಶಕಗಳಿಂದ ದೇವಸ್ಥಾನ ತೆರೆಯುವಾಗ ಮತ್ತು ಮುಚ್ಚುವಾಗ ಯೇಸುದಾಸ್ ಮತ್ತು ಜಯನ್-ವಿಜಯನ್ ಜೋಡಿ ಹಾಡಿದ ಹಾಡು ಹಾಕಲಾಗುತ್ತಿತ್ತು.
ಈಗ ಸಿರ್ ಕಾಳಿ ಗೋವಿಂದರಾಜನ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ವೀರಮನ್-ಕಣ್ಣನ್ ಮತ್ತು ನಾರಾಯಣ ರೆಡ್ಡಿ ಅವರು ಹಾಡಿರುವ ವಿವಿಧ ಭಾಷೆಗಳ ಹಾಡಿನ ನೂತನ ಸಿ.ಡಿ.ಯನ್ನು ಸಿದ್ದಗೊಳಿಸಲಾಗಿದೆ. ಪ್ರತಿ ವರ್ಷ ನವೆಂಬರ್-ಜನವರಿ ಅವಧಿಯಲ್ಲಿ 30 ದಶ ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಇವರಲ್ಲಿ ಹೆಚ್ಚು ಮಂದಿ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದವರಾಗಿರುತ್ತಾರೆ.