ಪೇದೆ ನಂದೀಶನಿಗೆ ಸಿಕ್ಕಿದ್ದು ಚಪ್ಪಲಿ ಸೇವೆ, ದೇಹ ಸೇವೆಯಲ್ಲ
ಸಹದ್ಯೋಗಿ ಎಂಬ ಕನಿಕರದಿಂದ ನಾನು, ಆತನನ್ನು ಕ್ಷಮಿಸಿದೆ. ಆದರೆ, ಆತ ಈ ಘಟನೆಯನ್ನುನನ್ನ ಗಮನಕ್ಕೆ ಬಾರದಂತೆ ರಹಸ್ಯ ಕ್ಯಾಮೆರಾದಲ್ಲಿ ಚಿತ್ರೀಕರಿಸಿ, ಈಗ ಸಾರ್ವತ್ರಿಕವಾಗಿ ಬಹಿರಂಗಪಡಿಸಿದ್ದಾನೆ. ಇದು ಸಹಮತ ಸರಸವಲ್ಲ ಎಂದು ಸಕಲೇಶಪುರದಲ್ಲಿ ಪೇದೆಯಾಗಿದ್ದ ಚಂದ್ರಕಲಾ ಸ್ಪಷ್ಟಪಡಿಸಿದ್ದಾರೆ.
ಈ ಘಟನೆ ನಡೆದು ಆಗಲೇ ಒಂದು ವರ್ಷ 2 ತಿಂಗಳ ಆಗಿದೆ. ಕಳೆದ 17 ವರ್ಷಗಳಿಂದಲೂ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ಅವಧಿಯಲ್ಲಿ ಯಾರೊಂದಿಗೂ ಅಸಭ್ಯವಾಗಿ ವರ್ತಿಸಿಲ್ಲ. ಉತ್ತಮ ಚಾರಿತ್ರ್ಯದಾಖಲೆಗಳನ್ನು ಹೊಂದಿದ್ದೇನೆ. ನನ್ನ ಸೇವೆಯನ್ನು ಪ್ರಶಂಸಿಸಿ, ಸಾರ್ವಜನಿಕರು ಹಾಗೂ ಪತ್ರಕರ್ತರೇ ಸನ್ಮಾನಿಸಿದ್ದಾರೆ. ನಂದೀಶನಿಗೆ ಅಂದು ಕ್ಷಮೆ ನೀಡಿದ್ದೆ ತಪ್ಪಾಯ್ತು ಎಂದು ಅನ್ನಿಸತೊಡಗಿದೆ ಎಂದು ಚಂದ್ರಕಲಾ ಹೇಳುತ್ತಾರೆ.
ಸಹಮತ ಸರಸವಲ್ಲ: ದೃಶ್ಯಾವಳಿಗಳಲ್ಲಿ ನಾನು ಪ್ರತಿಭಟಿಸುತ್ತಿರುವುದನ್ನು ನೋಡಬಹುದು. ನನ್ನ ಸಹಕಾರ ಇರುವ ದೃಶ್ಯಗಳು ಇದ್ದಲ್ಲಿ ಯಾವುದೇ ಶಿಕ್ಷೆಗೂ ಸಿದ್ಧನಿದ್ದೇನೆ ಎಂದು ಚಂದ್ರಕಲಾ ಸವಾಲು ಹಾಕುತ್ತಾರೆ. ಈ ಹಿಂದೆ ಇದ್ದ ಡಿವೈಎಸ್ ಪಿ ಕಲಾ ಕೃಷ್ಣಮೂರ್ತಿ ಅವರು ನನಗೆ ಹತ್ತಿರವಾಗಿದ್ದನ್ನು ಸಹಿಸ ಸಹದ್ಯೋಗಿಗಳ ಪಿತೂರಿ ಕೆಲಸ ಇದು. ಪೇದೆಗಳಾದ ನಂದೀಶ, ಜಗದೀಶ, ಮಲ್ಲಿಕಾರ್ಜುನ, ಧರಣೇಂದ್ರ ಎಂಬುವವರು ತಮ್ಮ ವಿರುದ್ಧ ಪಿತೂರಿ ನಡೆಸಿರುವ ಫಲ ಇದು ಎಂದು ಸದ್ಯ ಆಲೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಂದ್ರಕಲಾ ನೊಂದು ನುಡಿಯುತ್ತಾರೆ.
ಪಟ್ಟಣ ಪೊಲೀಸ್ ಠಾಣೆಯಲ್ಲೇ ಕಾರ್ಯ ನಿರ್ವಹಿಸುತ್ತಿರುವ ಪೇದೆ ನಂದೀಶ, ಕರ್ತವ್ಯದ ಮೇರೆಗೆ ಜಿಲ್ಲೆಯಿಂದ ಹೊರಗಿದ್ದು, ಸಂರ್ಪಕಕ್ಕೆ ಸಿಗುತ್ತಿಲ್ಲ. ಈತ ಆಲೂರು ತಾಲ್ಲೂಕಿನವನಾಗಿದ್ದು, ಕಳೆದ ಎರಡೂವರೆ ವರ್ಷಗಳಿಂದ ಸೇವೆಯಲ್ಲಿದ್ದಾನೆ. ತಿಂಗಳ ಹಿಂದೆಯಷ್ಟೇ ಈತನಿಗೆ ವಿವಾಹವಾಗಿದೆ.
ಎಂಎಂಎಸ್ ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯಲು ತನಿಖೆ ನಡೆಸಲಾಗುವುದು. ತಪ್ಪು ರುಜುವಾತಾದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಡಿವೈಎಸ್ ಪಿ ಉಪೇಂದ್ರ ಸ್ಥಳೀಯ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.