ಇನ್ಫೋಸಿಸ್ ಆಡಳಿತ ಮಂಡಳಿಗೆ ನಾಲ್ವರ ನೇಮಕ
ನಗರದಲ್ಲಿ ಶನಿವಾರ ನಡೆದ ಇನ್ಫೋಸಿಸ್ ಸಂಸ್ಥೆಯ 30ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಾಲ್ವರು ಹೊಸ ನಿರ್ದೇಶಕರ ಸೇರ್ಪಡೆಗೆ ಅನುಮೋದನೆ ನೀಡಲಾಯಿತು ಎಂದು ಪತ್ರಿಕಾಗೋಷ್ಠಿಯಲ್ಲಿ ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್. ನಾರಾಯಣ ಮೂರ್ತಿ ಪ್ರಕಟಿಸಿದರು. ಇನ್ಫೋಸಿಸ್ ಸಂಸ್ಥಾಪಕರಾಗಿರುವ ನಾರಾಯಣಮೂರ್ತಿ ಅವರಿಗೆ ಶನಿವಾರ ನಡೆದ ವಾರ್ಷಿಕ ಸಾಮಾನ್ಯ ಸಭೆ ಕೊನೆಯದಾಗಿತ್ತು.
ವಿ. ಬಾಲಕೃಷ್ಣನ್ - ಹಣಕಾಸು ಮುಖ್ಯ ಅಧಿಕಾರಿ, ಬಿ.ಜಿ.ಶ್ರೀನಿವಾಸ್ -ಹಿರಿಯ ಉಪಾಧ್ಯಕ್ಷ ( ಉತ್ಪಾದನಾ ವಿಭಾಗದ ಮುಖ್ಯಸ್ಥ ) , ಅಶೋಕ್ ವೇಮುರಿ - ಹಿರಿಯ ಉಪಾಧ್ಯಕ್ಷ ( ಜಾಗತಿಕ ಸೇವೆ ಮುಖ್ಯಸ್ಥ ) ಹಾಗೂ ಅಣ್ಣಾ ಫಡ್ಜ್ - ಹೆಚ್ಚುವರಿ ನಿರ್ದೇಶಕರನ್ನಾಗಿ ಆಡಳಿತ ಮಂಡಳಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಮೂರ್ತಿ ಹೇಳಿದರು.
2011ರ ಅಕ್ಟೋಬರ್ 1ರಿಂದ ಈ ನಾಲ್ವರೂ ಆಡಳಿತ ಮಂಡಳಿಯಲ್ಲಿ ಕಾರ್ಯಾರಂಭ ಮಾಡಲಿದ್ದಾರೆ. ಇನ್ಫೋಸಿಸ್ ಕಂಪನಿಯ ಪ್ರಮುಖ ಹುದ್ದೆಗಳಿಗೆ ಆಯ್ಕೆ ಮಾಡಲು ರಚಿಸಲಾಗಿದ್ದ ನೇಮಕಾತಿ ಸಮಿತಿ ಈ ನಾಲ್ವರ ಹೆಸರನ್ನು ಶಿಫಾರಸು ಮಾಡಿತ್ತು. ಕಂಪನಿಯ ನಿಯೋಜಿತ ಅಧ್ಯಕ್ಷ ಕುಂದಾಪುರ ವಾಮನ್ ಕಾಮತ್ ಮಾತನಾಡಿ, ನಾಲ್ವರು ಹೊಸಬರ ಸೇರ್ಪಡೆ ಉತ್ತಮ ಆಡಳಿತಕ್ಕೆ ಸಹಕಾರಿಯಾಗಲಿದೆ ಎಂದು ಪ್ರತಿಪಾದಿಸಿದರು.
ಕಂಪನಿಯ ಹೆಸರು ಬದಲಾವಣೆ: ಹೊಸ ಸದಸ್ಯರನ್ನು ನೇಮಕ ಮಾಡಿಕೊಂಡ ಬೆನ್ನಲ್ಲೇ ಕಂಪೆನಿಯ ಹೆಸರನ್ನು ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ ಅನ್ನು ಇನ್ಫೋಸಿಸ್ ಲಿಮಿಟೆಡ್ ಎಂದು ಮರು ನಾಮಕರಣ ಮಾಡಲು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು ಎಂದು ನಾರಾಯಣ ಮೂರ್ತಿ ತಿಳಿಸಿದರು. ಇದೇ ವೇಳೆ, ಕಂಪನಿಯ ಪ್ರತಿ ಷೇರಿಗೆ 20 ರೂಪಾಯಿ ಲಾಭಾಂಶ ಹಂಚಿಕೆ ಮಾಡಲು ಸಭೆ ಅನುಮೋದನೆ ನೀಡಿತು. ಷೇರುದಾರರಿಗೆ ಜೂ.13 ರಂದು ಲಾಭಾಂಶ ವಿತರಿಸಲಾಗುತ್ತದೆ ಎಂದು ಅವರು ಹೇಳಿದರು.