ಇ ಆಡಳಿತ ಕರ್ನಾಟಕ ಸರ್ಕಾರ ನಂ 1: ಬಿಎಸ್ ವೈ
ರಾಜ್ಯದ ಇ-ಆಡಳಿತ ಇಲಾಖೆ ಸ್ಥಾಪಿಸಿರುವ ನೂತನ ದತ್ತಾಂಶ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಕಳೆದ ಮೂರು ವರ್ಷಗಳಿಂದ ನಮ್ಮ ಸರ್ಕಾರ ಇ-ಆಡಳಿತಕ್ಕೆ ಹೆಚ್ಚು ಒತ್ತು ನೀಡಿದೆ. ಈಗಾಗಲೇ ವಾಣಿಜ್ಯ ಇಲಾಖೆಯಲ್ಲಿ ಸಂಪೂರ್ಣ ಇ-ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ಡಾಟಾ ಸೆಂಟರ್ ಉಪಯೋಗ: ಇ ಆಡಳಿತ ವ್ಯವಸ್ಥೆ ಹೊಂದಿರುವ ಈ ಡಾಟಾ ಸೆಂಟರ್ ಮೂಲಕ ಆಧಾರ್(UID), ಕಂದಾಯ ನೋಂದಣಿ ಇಲಾಖೆ(ಕಾವೇರಿ), ಸಾರಿಗೆ ಇಲಾಖೆ, ನಗರ ಪಾಲಿಕೆ ಆಡಳಿತ, ಇ- ಸಂಗ್ರಹ ( e-procurement) ಮುಂತಾದ ಹಲವು ವಿಭಾಗಗಳ ಕಾರ್ಯ ನಿರ್ವಹಣೆ ಆಗಲಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಇದರ ಸಂಪೂರ್ಣ ನಿರ್ವಹಣೆ ಜವಾಬ್ದಾರಿ ಪಡೆದಿದೆ.
ಇದಲ್ಲದೆ ಆರ್ ಟಿಐ ಅರ್ಜಿನಿರ್ವಹಣೆ, ಸಿಎಂ ಜೊತೆ ಸಾರ್ವಜನಿಕ ಸಂಪರ್ಕ, ರಾಜ್ಯ ಆಡಳಿತ ವೆಬ್ ತಾಣಗಳು( 14 ಇಲಾಖೆಗಳು ಹಾಗೂ 75 ಸೇವೆಗಳು ಆನ್ ಲೈನ್ ಗೆ) ಸ್ಟಾಂಪ್ಸ್ ಹಾಗೂ ನೋಂದಣಿ ಇಲಾಖೆ ಆನ್ ಲೈನ್ ಗೆ, ಕಾರ್ಮಿಕ ಇಲಾಖೆ, ರಾಜ್ಯ ಖಜಾನೆ ಹಾಗೂ ಅಭಿವೃದ್ಧಿ ಕಾರ್ಯಗಳ ನೇರ ವೀಕ್ಷಣೆಗೆ ಈ ದತ್ತಾಂಶ ಕೇಂದ್ರ ಬಳಕೆಯಾಗಲಿದೆ.
ಈ ದತ್ತಾಂಶ ಕೇಂದ್ರದ ಮೂಲಕ ರಾಜ್ಯದ ವಿವಿಧ ತಾಲೂಕು ಮಟ್ಟದ 3 ಸಾವಿರ ಕಚೇರಿಗಳಿಗೆ ಸಂಪರ್ಕ ಸಾಧ್ಯವಾಗಲಿದೆ. ಇದರಿಂದ ಸಮರ್ಪಕ ಮಾಹಿತಿ ಸಂಗ್ರಹ, ವರ್ಗಾವಣೆ ಮತ್ತು ನಿರ್ವಹಣೆ ಆಗಲಿದ್ದು, ಆ ಮೂಲಕ ದಕ್ಷ ಮತ್ತು ಪಾರದರ್ಶಕ ಆಡಳಿತ ನೀಡಲು ಶ್ರಮಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
'ಆಧಾರ್" ಯೋಜನೆಯಲ್ಲಿ ದೇಶದಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಈಗಾಗಲೇ ಮೈಸೂರು, ತುಮಕೂರುನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. 45 ಲಕ್ಷ ಜನ ನೋಂದಾಯಿಸಿಕೊಂಡಿದ್ದಾರೆ. ಈ ಯಶಸ್ಸಿನ ಆಧಾರದಲ್ಲಿ ಇದನ್ನು ಮುಂದುವರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾನೂನು ಸಚಿವ ಸುರೇಶ್ ಕುಮಾರ್, ಸರಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ರಾಜ್ಯದ ಇ-ಆಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್, ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ಹಿರಿಯ ನಿರ್ದೇಶಕ ಎಸ್.ಬಿ.ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.