ಮೈಸೂರಿನಲ್ಲಿ ಆನೆ ನಂತರ ಚಿರತೆ ಪ್ರತ್ಯಕ್ಷ
ನಗರದ ವಿದ್ಯಾರಣ್ಯಪುರಂನ ಸೂಯೇಜ್ ಫಾರಂ ಬಳಿ ರಾತ್ರಿ 11.45ರ ವೇಳೆಗೆ ನಾಯಿಗಳು ಬಗುಳಲಾರಂಭಿಸಿದವು. ಈ ಸಂದರ್ಭ ಮನೆಯಿಂದ ಹೊರಬಂದು ನೋಡಿದ ವ್ಯಕ್ತಿಯೊಬ್ಬರಿಗೆ ಚಿರತೆಯೊಂದು ನಾಯಿಯನ್ನು ಅಟ್ಟಿಸಿಕೊಂಡು ಹೋಗುತ್ತಿರುವುದು ಕಾಣಿಸಿದೆ. ಇದೇ ಚಿರತೆಯನ್ನು ಜೆ.ಪಿ.ನಗರದ ನಿವಾಸಿಯಾದ ಸುಬ್ರಹ್ಮಣ್ಯ ಎಂಬುವರು ಕೂಡ ನೋಡಿದ್ದು ಅವರು ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆಯೇ ರಾತ್ರಿಯೇ ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳನ್ನು ಕಳುಹಿಸಲಾಗಿತ್ತು. ಇಂದು ಮುಂಜಾನೆ ಅರಣ್ಯಾಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದರಾದರೂ ಅಲ್ಲಿ ಚಿರತೆ ಕಾಣಲಿಲ್ಲ.
ಅಲ್ಲಿನ ನಿವಾಸಿಗಳು ಹೇಳುವ ಪ್ರಕಾರ ಈ ಚಿರತೆ ಚಾಮುಂಡಿ ಬೆಟ್ಟದ ಕಾಡಿನಿಂದ ಬಂದಿದ್ದು ಅದು ಸೂಯೇಜ್ ಫಾರಂನಲ್ಲಿ(ಈ ಫಾರಂನಲ್ಲಿ ಹುಲ್ಲು ಬೆಳೆಯಲಾಗುತ್ತಿದೆ) ಹುಲ್ಲುಗಳ ನಡುವೆ ಅವಿತು ಕುಳಿತಿರುವ ಸಾಧ್ಯತೆ ಕಡಿಮೆಯಿದ್ದು, ಅದು ರಾತ್ರಿಯೇ ಹಿಂತಿರುಗಿದೆ.
ಸೂಯೇಜ್ ಫಾರಂ ನೂರಾರು ಎಕರೆ ವಿಸ್ತೀರ್ಣ ಹೊಂದಿದ್ದು, ಇಲ್ಲಿಗೆ ಸಮೀಪವೇ ಚಾಮುಂಡಿಬೆಟ್ಟ ಇರುವುದರಿಂದ ಅಲ್ಲಿನ ಕಾಡಿನಿಂದ ಒಮ್ಮೊಮ್ಮೆ ಚಿರತೆಗಳು ಇತ್ತ ಬರುವುದು ಸಾಮಾನ್ಯ. ಆದರೆ ಅವು ಯಾರಿಗೂ ತೊಂದರೆ ನೀಡದೆ ಹಿಂತಿರುಗುತ್ತವೆ. ಆ ಬಗ್ಗೆ ಭಯಭೀತರಾಗುವ ಅಗತ್ಯವಿಲ್ಲ ಎಂದು ಅಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ.