ಹಂಪಿಯಲ್ಲಿ ಬ್ಯಾಟರಿ ಚಾಲಿತ ವಾಹನಗಳಿಂದ ಸುಲಿಗೆ?
ಒಟ್ಟು 25 ಬ್ಯಾಟರಿ ಚಾಲಿತ ವಾಹನಗಳಿವೆ. ಕೆಲವು 14 ಸೀಟಿನವು, ಇನ್ನೂ ಕೆಲವು 8 ಸೀಟಿನವು. ಈ ಬ್ಯಾಟರಿ ಚಾಲಿತ ವಾಹನಗಳಿಂದಲೇ ತಿಂಗಳೊಂದಕ್ಕೆ ಕನಿಷ್ಠ 11 ಲಕ್ಷ ರುಪಾಯಿ ಶುಲ್ಕ ಸಂಗ್ರಹ ಆಗುತ್ತಿದೆ. ಈ ಬ್ಯಾಟರಿ ವಾಹನಗಳ ಮೂಲಕ ಪ್ರವಾಸೋದ್ಯಮ ಇಲಾಖೆ ಲಾಭದಾಯಕ ವಹಿವಾಟು ನಡೆಸುತ್ತಿದೆ ಎನ್ನುವುದು ಪ್ರವಾಸಿಗರ ಆರೋಪ.
ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಜಿ. ಜನಾರ್ದನ ರೆಡ್ಡಿ ಅವರ ಓಲೈಕೆಗಾಗಿ ಎನ್ನುವಂತೆ ಹಂಪೆಯಲ್ಲಿ ಬ್ಯಾಟರಿ ಚಾಲಿತ ವಾಹನಗಳನ್ನು ಪ್ರಾಯೋಗಿಕವಾಗಿ ಚಾಲಿಸುತ್ತಿರುವ ಪ್ರವಾಸೋದ್ಯಮ ಇಲಾಖೆ ಪ್ರತಿ ಪ್ರಯಾಣಿಕರಿಗೆ 20 ರುಪಾಯಿ, ಅಧ್ಯಯನ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳಿಗೂ ತಲಾ 20 ರುಪಾಯಿ ಶುಲ್ಕವನ್ನು ಸಂಗ್ರಹ ಮಾಡಲಾಗುತ್ತಿದೆ.
ಸ್ಥಳೀಯ ಶಾಸಕ ಆನಂದಸಿಂಗ್ ಅವರು, 'ವಿದ್ಯಾರ್ಥಿಗಳಿಗೆ ಶುಲ್ಕ ಪಡೆಯಬಾರದು. ಅದರಲ್ಲೂ ಪ್ರವಾಸಕ್ಕಾಗಿ ಹಂಪೆಗೆ ಬಂದಿರುವ ವಿದ್ಯಾರ್ಥಿಗಳು ಇತಿಹಾಸ ಕಲಿಕೆಗಾಗಿ ಬಂದಿರುತ್ತಾರೆ. ಕಾರಣ ಅವರಿಂದ ಶುಲ್ಕ ಪಡೆಯಬಾರದು" ಎಂದು ಆದೇಶ ಜಾರಿ ಮಾಡಿದ್ದರು. ಆದರೆ, ಶಾಸಕರ ಆದೇಶಕ್ಕೆ ಕವಡೆ ಕಿಮ್ಮತ್ತಿನ ಬೆಲೆಯೂ ಇಲ್ಲವೆನ್ನುವಂತೆ ವಿದ್ಯಾರ್ಥಿಗಳಿಂದಲೂ ಶುಲ್ಕಸಂಗ್ರಹ ಮಾಡಲಾಗುತ್ತಿದೆ.
ಈ ವಾಹನ ಸಾಗುವುದು ಯಾವ್ಯಾವ ಕಡೆ ಗೊತ್ತೇ? ವಿಜಯವಿಠ್ಠಲ ದೇವಸ್ಥಾನದ ಬಳಿ ನಿಲ್ಲುತ್ತದೆ. ಅಲ್ಲಿಂದ ಪುರಂದರ ದಾಸರ ಮಂಟಪ, ಸೀತೆ ಸೆರಗು, ರಘುನಾಥ ಮಂಟಪ ಇನ್ನಿತರೆ ಕಡೆಗಳಲ್ಲಿ ಈ ವಾಹನ ಸಾಗುವುದೇ ಇಲ್ಲ. ಆದರೂ, ಪ್ರವಾಸಿಗರಿಂದ 20 ರು. ಕಿತ್ತಲಾಗುತ್ತಿದೆ. ವಿಜಯ ವಿಠ್ಠಲ ದೇವಸ್ಥಾನಕ್ಕೆ ವಾಹನಗಳ ಸಂಚಾರ ನಿಷೇಧಿಸಿ, ಬ್ಯಾಟರಿ ಚಾಲಿತ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ, ಎಲ್ಲಿಯ ನ್ಯಾಯ?
ಶೌಚಾಲಯಗಳಿಗೆ ಬೀಗ : ಹಂಪೆಯಲ್ಲಿ ನೈರ್ಮಲ್ಯ - ಸ್ವಚ್ಛತೆ ಕಾಪಾಡಲು ವಿಜಯ ವಿಠ್ಠಲ ದೇವಸ್ಥಾನ, ಗೆಜ್ಜಲ ಮಂಟಪ, ಕೃಷ್ಣ ಬಜಾರ್, ಕಮಲ್ ಮಹಲ್ ಬಳಿ ಮೊಬೈಲ್ ಶೌಚಾಲಯಗಳನ್ನು ನಿಲ್ಲಿಸಲಾಗಿದೆ. ಇವು ಸದಾ ಮುಚ್ಚಿರುತ್ತವೆ. ಹಂಪೆಯ ಸ್ವಚ್ಛತಾ ಕಾರ್ಯವನ್ನು ಖಾಸಗಿ ಸಂಸ್ಥೆ ನಿರ್ವಹಿಸುತ್ತಿರುವ ಕಾರಣ ಈ ಶೌಚಾಲಯಗಳು ಸದಾ ಬೀಗ ಹಾಕಿಕೊಂಡಿರುತ್ತವೆ.