ಬಾಬಾಗಿರಿಗೆ ಕರ್ನಾಟಕದ ಪುತ್ತೂರಲ್ಲಿ ಸ್ಕೆಚ್: ಚಿದಂಬರಂ
ರಾಮದೇವ್ ನಡೆಸುತ್ತಿರುವುದು ಆರ್ಎಸ್ಎಸ್ ಹಾಗೂ ಅದರ ಮುಂಚೂಣಿ ಸಂಘಟನೆಗಳ ಬೆಂಬಲವುಳ್ಳ ರಾಜಕೀಯ ಚಳವಳಿ ಎಂದೂ ಅವರು ಹರಿಹಾಯ್ದಿದ್ದಾರೆ.
'ರಾಮದೇವ್ ಹೋರಾಟದ ಹಿಂದೆ ಯಾರಿದ್ದಾರೆ ಎಂಬುದನ್ನು ನೀವು ತಿಳಿಯಬೇಕು. ಆರ್ಎಸ್ಎಸ್ನ ಪರಮೋಚ್ಚ ಸಂಸ್ಥೆ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಸಭೆ ಕಳೆದ ಮಾರ್ಚ್ನಲ್ಲಿ ಕರ್ನಾಟಕದ ಪುತ್ತೂರಿನಲ್ಲಿ ನಡೆದಿತ್ತು.
ಭ್ರಷ್ಟಾಚಾರದ ವಿರುದ್ಧ ಹೋರಾಡುವ ಯಾವುದೇ ಸಂಘಟನೆಗಾಗಲೀ, ವ್ಯಕ್ತಿಗಳಿಗಾಗಲೀ ಬೆಂಬಲ ನೀಡಲು ಆ ಸಭೆ ನಿರ್ಧರಿಸಿತ್ತು. ಇದಾದ ಬಳಿಕ ಏಪ್ರಿಲ್ 2ರಂದು ಆರ್ಎಸ್ಎಸ್ ಭ್ರಷ್ಟಾಚಾರ ನಿಗ್ರಹ ದಳ ರಚಿಸಿತು. ಅದಕ್ಕೆ ಪೋಷಕರಾಗಿದ್ದವರು ಇದೇ ರಾಮದೇವ್' ಎಂದು ಸಂದರ್ಶನವೊಂದರಲ್ಲಿ ಚಿದಂಬರಂ ತಿಳಿಸಿದ್ದಾರೆ. ಆರ್ಎಸ್ಎಸ್ನ ವಿದ್ಯಾರ್ಥಿ ಘಟಕವಾದ ಎಬಿವಿಪಿ ಮೇ 12ರಂದು 'ಭ್ರಷ್ಟಾಚಾರದ ವಿರುದ್ಧ ಯುವ ಜನತೆ' ಎಂಬ ಸಂಘಟನೆ ಹುಟ್ಟುಹಾಕಿತು. ಅಲ್ಲದೆ ತಾವು ರಾಮದೇವ್ ಜತೆ ಸಮನ್ವಯ ಸಾಧಿಸಿರುವುದಾಗಿ ಬಹಿರಂಗವಾಗಿ ಹೇಳಿಕೊಂಡಿತ್ತು ಎಂದು ಹೇಳಿದ್ದಾರೆ.
ಆರ್ಎಸ್ಎಸ್ ಹಾಗೂ ಎಬಿವಿಪಿಗೆ ಸೇರಿದ ಎಲ್ಲ ಜನರೂ ಸಂಪೂರ್ಣವಾಗಿ, ನಿಕಟವಾಗಿ ರಾಮದೇವ್ ಜತೆ ಕೆಲಸ ಮಾಡುತ್ತಿದ್ದಾರೆ ಎಂದು ಮೇ 28ರಂದು ವಿಎಚ್ಪಿ ನಾಯಕ ಅಶೋಕ್ ಸಿಂಘಲ್ ಕೂಡ ಸುತ್ತೋಲೆ ಹೊರಡಿಸಿದ್ದರು. ಹೀಗಾಗಿ ಈ ಯೋಗ ಶಿಕ್ಷಕ ಅಥವಾ ಯೋಗ ಗುರು ನಡೆಸುತ್ತಿರುವುದು ಚಳವಳಿಯಲ್ಲ. ಆರ್ಎಸ್ಎಸ್ ಹಾಗೂ ಅದರ ಮುಂಚೂಣಿ ಸಂಘಟನೆಗಳ ಬೆಂಬಲವುಳ್ಳ ರಾಜಕೀಯ ಹೋರಾಟ. ಸರ್ಕಾರ ಶಾಂತಿಯುತ ಹೋರಾಟಕ್ಕೆ ಅನುಮತಿ ನೀಡಲಿದೆ. ಆದರೆ ದಳ್ಳುರಿಗೆ ಕಾರಣವಾಗುವ ಚಳವಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.