ಗಿಡಮೂಲಿಕೆ ಬೆಳೆಯಲಿದ್ದಾರೆ ಕರ್ನಾಟಕದ ಕೈದಿಗಳು
ಹಿಮಾಲಯ ಹರ್ಬಲ್ ಹೆಲ್ತ್ ಕೇರ್ ನ ಈ ಸಾಮಾಜಿಕ ಕಾರ್ಯ ತಂತ್ರವು ಕೈದಿಗಳಿಗೆ ಹಲವು ರೀತಿಯಲ್ಲಿ ನೆರವು ನೀಡಲಿದೆ. ಕೈದಿಗಳಿಗೆ ಉದ್ಯೋಗ ಅವಕಾಶ ನೀಡುವುದು, ಅವರ ಪರಿಣತಿ ಹೆಚ್ಚಿಸುವುದು ಮತ್ತು ಜೈಲಿಂದ ಹೊರನಡೆದ ನಂತರ ಹೊಸ ರೀತಿಯಲ್ಲಿ ಬದುಕು ನಡೆಸಲು ಅನುವು ಮೂಡಿಕೊಡುವ ಗುರಿ ಈ ಒಪ್ಪಂದದಾಗಿದೆ.
ಆಧುನಿಕ ತಂತ್ರಜ್ಞಾನ ಬಳಸಿ ಕೈದಿಗಳಿಂದ ಗಿಡಮೂಲಿಕೆ ಬೆಳೆಸಲಾಗುತ್ತದೆ. ಆರಂಭಿಕ ಹಂತವಾಗಿ ಈ ಯೋಜನೆಯನ್ನು ದೇವನಹಳ್ಳಿ ತಾಲೂಕಿನ ಅವಥಿ ಗ್ರಾಮದಲ್ಲಿರುವ ಜೈಲಿನಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ.
"ಒಂದೆರಡು ಎಕರೆ ಸ್ಥಳದಲ್ಲಿ ಗಿಡಮೂಲಿಕೆ ಬೆಳೆಸಲಾಗುವುದು. ಇದಕ್ಕಾಗಿ ಕಂಪನಿಯೇ ಬೀಜ, ತಾಂತ್ರಿಕ ಸಲಕರಣೆಗಳು ಮತ್ತು ತರಬೇತಿ ನೀಡಲಿದೆ. ಕೈದಿಗಳು ಪರಿಣತಿಯೊಂದಿಗೆ ಕೊಂಚ ದುಡ್ಡನ್ನೂ ಗಳಿಸಬಹುದು" ಎಂದು ಹಿಮಾಲಯ ಹೆಲ್ತ್ ಕೇರ್ ಕಂಪನಿ ಹೇಳಿದೆ.
ಒಮ್ಮೆ ಈ ಯೋಜನೆ ಜನಪ್ರಿಯಗೊಂಡರೆ ರಾಜ್ಯದ ಎಲ್ಲಾ ಜೈಲುಗಳಿಗೆ ಇದನ್ನು ವಿಸ್ತರಿಸಲಾಗುವುದು. ಆರಂಭದಲ್ಲಿ ಅಲ್ಫಾಫಾ(ಕುದ್ರೆ ಮೆಂತೆ) ಗಿಡಮೂಲಿಕೆ ಬೆಳೆಸಲು ನಿರ್ಧರಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್(ಜೈಲು) ನಿರ್ದೇಶಕ ಕೂಚಣ್ಣ ಶ್ರೀನಿವಾಸ್ ಹೇಳಿದ್ದಾರೆ.