ಇಷ್ಟಕ್ಕೂ ಪಕ್ಷೇತರ ಶಾಸಕರು ಏನಾದರು ?
ಗುರುವಾರ ನಡೆದ ವಿಶ್ವಾಸಮತ ಯಾಚನೆ ಸಂದರ್ಭ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ದಾರಿಯಲ್ಲೇ ಸಭಾತ್ಯಾಗ ಮಾಡಿದ ಪಕ್ಷೇತರ ಶಾಸಕರು ಬಿಜೆಪಿ ಸರ್ಕಾರದಿಂದ ಅಂತರ ಕಾಪಾಡಿಕೊಳ್ಳಲು ಉದ್ದೇಶಿಸಿದ್ದಾರೆ. ಅಲ್ಲದೆ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಜತೆಗೂ ಗುರುತಿಸಿಕೊಳ್ಳದಿರುವ ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯೊಂದಿಗೆ ಅಂತರ ಕಾಪಾಡಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ. ಬೆಂಬಲ ಕೋರಿ ಬಿಜೆಪಿಯೂ ಮನವಿ ಮಾಡಿಲ್ಲ. ಹೀಗಿರುವಾಗ ತಾವಾಗಿಯೇ ಬೆಂಬಲ ನೀಡುತ್ತೇವೆ ಎಂದು ಮುಂದೆ ಹೋಗಲು ಪಕ್ಷೇತರರಿಗೂ ಮನಸ್ಸಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಪ್ರತ್ಯೇಕ ಕೂಟವೊಂದನ್ನು ರಚಿಸಿಕೊಳ್ಳುವ ಮೂಲಕ ಒಗ್ಗಟ್ಟು ಕಾಪಾಡಿಕೊಳ್ಳಲು ಮುಂದಾಗಿದ್ದಾರೆ.
ಅಲ್ಲದೆ, ಸದನದಲ್ಲಿ ಸರ್ಕಾರಕ್ಕಾಗಲಿ ಅಥವಾ ಪ್ರತಿಪಕ್ಷಗಳಿಗಾಗಲಿ ವಿಷಯಾಧಾರಿತ ಬೆಂಬಲ ನೀಡುವ ತೀರ್ಮಾನವನ್ನೂ ಈ ಪಕ್ಷೇತರ ಶಾಸಕರು ಮಾಡಿದ್ದಾರೆ. ಜನಪರ ಕಾಳಜಿಯನ್ನು ಮುಂದಿಟ್ಟುಕೊಂಡು ಆಯಾ ಸಂದರ್ಭಕ್ಕೆ ತಕ್ಕಂತೆ ತಮ್ಮ ಅಭಿಪ್ರಾಯದ ಬೆಂಬಲ ನೀಡುವುದಾಗಿ ಪಕ್ಷೇತರ ಶಾಸಕ ಸುಧಾಕರ್ ಹೇಳಿದ್ದಾರೆ.
ಗುರವಾರ ವಿಧಾನಸಭೆಗೆ ಆಗಮಿಸುವ ಮುನ್ನ ಪಕ್ಷೇತರ ಶಾಸಕರಾದ ಡಿ.ಸುಧಾಕರ್, ಶಿವರಾಜ್ ತಂಗಡಗಿ, ವೆಂಕಟರಮಣಪ್ಪ, ಪಿ.ಎಂ.ನರೇಂದ್ರಸ್ವಾಮಿ ಹಾಗೂ ಗೂಳಿಹಟ್ಟಿ ಶೇಖರ್ ಒಟ್ಟಾಗಿ ಮೊದಲಿಗೆ ಚಾಲುಕ್ಯ ವೃತ್ತದ ಬಳಿಯ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ವಿಧಾನಸೌಧದ ಆವರಣ ಪ್ರವೇಶಿಸಿ ಬಾಬು ಜಗಜೀವನರಾಂ, ಅಂಬೇಡ್ಕರ್, ಮಾಜಿ ಮುಖ್ಯಮಂತ್ರಿಗಳಾದ ದೇವರಾಜು ಅರಸು ಹಾಗೂ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ವಿಧಾನಸಭೆಗೆ ಆಗಮಿಸಿದಾಗಲೂ ಅತ್ಯಂತ ವಿನಮ್ರತೆಯ ಭಾವದಲ್ಲಿದ್ದ ಈ ಶಾಸಕರು ಕಲಾಪ ಆರಂಭಕ್ಕೂ ಮೊದಲು ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ಸಿನ ಕೆಲವು ಸದಸ್ಯರೊಂದಿಗೆ ಉಭಯ ಕುಶಲೋಪರಿ ನಡೆಸಿದರು. ಕೆಲವು ಶಾಸಕರು ಇವರಿಗೆ ಕೈಕುಲುಕುವ ಮೂಲಕ ಅಭಿನಂದನೆಗಳನ್ನೂ ಸಲ್ಲಿಸಿದರು. ಒಟ್ಟಿನಲ್ಲಿ ತಿರುಗಿ ವಿಧಾನಸಭೆಗೆ ಬಂದೆವಲ್ಲ ಸಾಕು ಎಂಬ ನಿಟ್ಟುಸಿರಿನೊಂದಿಗೆ ಪಕ್ಷೇತರ ಶಾಸಕರು ಕಲಾಪ ಮುಗಿಸಿ ವಾಪಸಾದರು.