ಮಂಗಳೂರು : ದಾಯ್ಜಿವರ್ಲ್ಡ್ ಸ್ವಾಭಿಮಾನ 'ವಿಶೇಷ' ಪ್ರಶಸ್ತಿ
ಪೋಲಿಯೋ ಬಾಧಿತರಾದರೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಮಹಮ್ಮದ್ ಇಕ್ಬಾಲ್, ಗಾಲಿಕುರ್ಚಿ ಆಧಾರದಿಂದ ಕಾರ್ಯನಿರ್ವಹಿಸುತ್ತಿರುವ ಸುಧಾರತ್ನ ಕೆ.ಎಸ್ ಅವರ ಕಲಾ ಸಾಧನೆಗಾಗಿ, ವಿಕಲಚೇತನರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ವಿಲ್ಫ್ರೇಡ್ ಗೋಮ್ಸ್, ರೈಲು ದುರ್ಘಟನೆಯಲ್ಲಿ ಒಂದು ಕಾಲು, ಒಂದು ಕೈ ಕಳೆದುಕೊಂಡರೂ ಜಾದೂ ಮೂಲಕ ಸಮಾಜ ಸುಧಾರಣೆಯಲ್ಲಿ ತೊಡಗಿರುವ ಫಾ. ಐವನ್ ಮಾಡ್ತಾ ಅವರನ್ನು ಪ್ರಶಸ್ತಿಗಾಗಿ ಆಯ್ಕೆಮಾಡಲಾಗಿದೆ. ಪ್ರಶಸ್ತಿಯು ತಲಾ 25 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಸ್ವಾಭಿಮಾನ ವಿಶೇಷ ಪ್ರಶಸ್ತಿಗೆ ಗಾಲಿ ಕುರ್ಚಿ ಮೂಲಕವೇ ಟೆನಿಸ್ ಆಡುತ್ತಿರುವ ಅಂತಾರಾಷ್ಟ್ರೀಯ ಕ್ರೀಡಾಪಟು ಬೋನಿಸ್ ಪ್ರಭು, ಮಾತು ಮತ್ತು ಶ್ರಾವ್ಯ ಹೀನತೆಯಿದ್ದರೂ ಕಲೆಯಲ್ಲಿ ಸಾಧನೆ ಮಾಡಿರುವ ಝೀನಾ ಕುಲಾಸೊ ಮತ್ತು ಅಂಧತ್ವವಿದ್ದರೂ ಸಂಗೀತದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಮಣಿಪಾಲದ ಅರುಣಾ ಕುಮಾರಿ ಅವರನ್ನು ಆರಿಸಲಾಗಿದೆ. ಈ ಪ್ರಶಸ್ತಿಯು ತಲಾ 10 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಮಂಗಳೂರಲ್ಲಿ ಜೂನ್ 12ರಂದು ಪ್ರಶಸ್ತಿ ವಿತರಿಸುವುದಾಗಿ ಪ್ರಶಸ್ತಿ ಆಯ್ಕೆ ಸಮಿತಿಯ ಹಿರಿಯ ಸದಸ್ಯರಾದ ಬಸ್ತಿ ವಾಮನ ಶೆಣೈ ತಿಳಿಸಿದ್ದಾರೆ.