ರೆಡ್ಡಿ ವಿಷಯದಲ್ಲಿ ಮೃದುಧೋರಣೆ ತಾಳಿದ ಸುಷ್ಮಾ
ಯಡಿಯೂರಪ್ಪ ಮತ್ತು ಬಿಜೆಪಿ ಮಾಜಿ ರಾಷ್ಟ್ರಾಧ್ಯಕ್ಷ ರಾಜನಾಥ ಸಿಂಗ್ ಅವರೇ ಸ್ಪಷ್ಟನೆ ನೀಡಿದ ಮೇಲೆ ನನ್ನದೇನಿದೆ. ಇದರಲ್ಲಿ ಮತ್ತೆ ಮಾತನಾಡುವುದೇನಿಲ್ಲ. ವಿವಾದ ಇಲ್ಲಿಗೆ ಬಗೆಹರಿದಂತಾಗಿದೆ. ಹಾಗೆಯೆ, ತಮ್ಮ ಮತ್ತು ಅರುಣ್ ಜೇಟ್ಲಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅದು ಪತ್ರಿಕೆಗಳು ಸೃಷ್ಟಿಸಿದ್ದು ಎಂದು ಹೇಳಿ ಹೊತ್ತಿರುವ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ.
ಔಟ್ ಲುಕ್ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ, ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ರೆಡ್ಡಿ ಸಹೋದರರು ರಾಜಕೀಯವಾಗಿ ಬೆಳೆಯುವಲ್ಲಿ ತಮ್ಮ ಕೈವಾಡವಿಲ್ಲ. ಅವರನ್ನು ಯಡಿಯೂರಪ್ಪ ಸಂಪುಟಕ್ಕೆ ಸೇರಿಸಿದ್ದೆ ಅರುಣ್ ಜೇಟ್ಲಿ ಎಂದು ಹೇಳಿ ಜೇಟ್ಲಿಯವರೊಂದಿಗೆ ಸುಷ್ಮಾ ಸ್ವರಾಜ್ ವಿರಸ ಕಟ್ಟಿಕೊಂಡಿದ್ದರು.
ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ಅವರ ವಿರುದ್ಧ ಸ್ಪರ್ಧಿಸಿದಾಗಿನಿಂದ ರೆಡ್ಡಿ ಸಹೋದರರೊಂದಿಗೆ ತಮ್ಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು ಮತ್ತು ರೆಡ್ಡಿ ಸಹೋದರರು ಸುಷ್ಮಾ ಅವರನ್ನು 'ಅಮ್ಮ' ಅಂತಲೇ ಕರೆಯುತ್ತಿದ್ದರು. ರೆಡ್ಡಿಗಳು ಯಡಿಯೂರಪ್ಪ ವಿರುದ್ಧ ಸಿಡಿದೆದ್ದಿದ್ದಾಗ ಸುಷ್ಮಾ ಅವರೇ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಆದರೆ ಸಂದರ್ಶನದಲ್ಲಿ ಆವೇಶಭರಿತ ಹೇಳಿಕೆ ನೀಡಿದ್ದು ಸಾಕಷ್ಟು ಇರುಸುಮುರುಸು ತಂದಿತ್ತು.
ರೆಡ್ಡಿಗಳನ್ನು ಸಂಪುಟಕ್ಕೆ ಸೇರಿಸಿದ್ದು ಸುಷ್ಮಾ ಅವರ ಅಣತಿಯ ಮೇರೆಗೆ ಅಲ್ಲ, ತಾವೇ ಸ್ವತಃ ಈ ನಿರ್ಧಾರ ಕೈಗೊಂಡಿದ್ದು ಎಂದು ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದರು. ಬಿಜೆಪಿಯ ಆಂತರಿಕ ಭಿನ್ನಾಭಿಪ್ರಾಯವನ್ನೇ ಅಸ್ತ್ರ ಮಾಡಿಕೊಂಡು ಕಾಂಗ್ರೆಸ್ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು. ಮಧ್ಯ ಪ್ರವೇಶಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತೀನ್ ಗಡ್ಕರಿ ಅವರು ಯಾವುದೇ ರೀತಿಯ ಬಹಿರಂಗ ಹೇಳಿಕೆ ನೀಡದಂತೆ ಸುಷ್ಮಾ ಅವರಿಗೆ ತಾಕೀತು ಮಾಡಿದ್ದರು.