ಬಳ್ಳಾರಿ ಬ್ರದರ್ಸ್ ಬಗ್ಗೆ ಅಮ್ಮ ಹೇಳಿದ ನೂರೆಂಟು ಸತ್ಯಗಳು!
ರೆಡ್ಡಿ ಬ್ರದರ್ಸ್ಗೆ ತಾವು ಆಪ್ತರಕ್ಷಕಿ ಅಲ್ಲ. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಜನಾರ್ದನರೆಡ್ಡಿ ಮತ್ತು ಕರುಣಾಕರ ರೆಡ್ಡಿ ಸಚಿವ ಸ್ಥಾನ ಕೊಡಿಸಲು ತಾವು ಪ್ರಭಾವ ಬೀರಿಲ್ಲ. ವರ್ಷದಲ್ಲಿ ಒಂದು ದಿನ ಮಾತ್ರ ರೆಡ್ಡಿಗಳೊಂದಿಗೆ ನಾನು ಮಾತನಾಡುತ್ತೇನೆ. ಅದೂ ವರಮಹಾಲಕ್ಷ್ಮಿ ಹಬ್ಬದ ದಿನ ಬಳ್ಳಾರಿಗೆ ಹೋದಾಗ. ಉಳಿದ 364 ದಿನ ಅವರೊಂದಿಗೆ ನನಗೆ ಸಂಪರ್ಕವಾಗಲಿ, ಸಂವಾದವಾಗಲಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ಸುಷ್ಮಾ ನಮ್ಮ ತಾಯಿ, ಅವರು ಹೇಳಿದ ಮಾತೇ ನಮಗೆ ವೇದವಾಕ್ಯ" ಎಂದು ಸಂದರ್ಭ ಸಿಕ್ಕಿದಾಗಲೆಲ್ಲಾ ರೆಡ್ಡಿ ಬ್ರದರ್ಸ್ ಗಿಳಿಪಾಠ ಒಪ್ಪಿಸುತ್ತಿದ್ದರು. ಈಗ ಅಮ್ಮ ಹೇಳಿದ ನೂರೆಂಟು ಸತ್ಯಗಳಿಂದ, ತಾಯಿ ಮಕ್ಕಳ ನಡುವಿನ ಸೌಧ ಕುಸಿದುಬಿದ್ದಂತಾಗಿದೆ. "ರೆಡ್ಡಿ ಸಹೋದರರು ನನ್ನ ಮಕ್ಕಳಲ್ಲ. ಅವರನ್ನು ಮಕ್ಕಳಾಗಿ ಬಿಂಬಿಸಿರುವುದರ ಹಿಂದೆ ವಿರೋಧಿಗಳ 'ಕೈ'ವಾಡವಿದೆ " ಎಂದು ಸುಷ್ಮಾ ಹೊಸ ವರಸೆಯಲ್ಲಿ ಹೇಳಿದ್ದಾರೆ.
ಬಳ್ಳಾರಿ ಸೋದರರು ಸಚಿವರಾದಾಗ ರಾಜ್ಯ ಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಕರ್ನಾಟಕ ಬಿಜೆಪಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಯಡಿಯೂರಪ್ಪ, ವೆಂಕಯ್ಯನಾಯ್ಡು ಹಾಗೂ ಅನಂತಕುಮಾರ್ ಹಿರಿಯ ನಾಯಕರಾಗಿದ್ದರು. ಅವರವರೆ ನಿರ್ಧರಿಸಿ ರೆಡ್ಡಿಗಳನ್ನು ಸಚಿವರನ್ನಾಗಿ ಮಾಡಿದ್ದಾರೆ. ಇದರಲ್ಲಿ ನನ್ನ ಕೈವಾಡವೇನು ಇಲ್ಲ. ಒಂದೇ ಕುಟುಂಬದ ಮೂವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ನನ್ನ ವಿರೋಧವಿತ್ತು ಎಂದಿದ್ದಾರೆ ಸುಷ್ಮಾ ಸ್ವರಾಜ್. (ದಟ್ಸ್ಕನ್ನಡ ಸಿನಿವಾರ್ತೆ)