ಕೊಡಗಿನ ದೇವರಪುರದಲ್ಲಿ ಸಂಭ್ರಮದ ಕುಂಡೆ ಹಬ್ಬ
ಬೆಳಿಗ್ಗೆಯೇ ಎಲ್ಲೆಡೆಯಿಂದ ವೇಷಧಾರಿಗಳಾಗಿ ಆಗಮಿಸಿದ ಬುಡಕಟ್ಟು ಮಂದಿ ರಸ್ತೆಯಲ್ಲಿ ತಿರುಗಾಡುತ್ತಾ ವಾಹನಗಳನ್ನು ತಡೆದು ಭಿಕ್ಷೆ ಬೇಡಿದರೆ, ಇನ್ನು ಕೆಲವರು ಅಂಗಡಿ, ಮನೆಗಳಿಗೆ ತೆರಳಿ ಕುಂಡೇ... ಕುಂಡೇ.... ಎನ್ನುತ್ತಾ ಅಶ್ಲೀಲ ಪದಗಳಿಂದ ಬೈಯುತ್ತಾ ಹಣ ವಸೂಲಿ ಮಾಡಿದರು.
ಹಣ ನೀಡಿದವರಿಗೆ ಒಳ್ಳೆ ಕುಂಡೆ ಎಂದು ಹೊಗಳಿದ ವೇಷಧಾರಿಗಳು, ಕೊಡದೆ ಸತಾಯಿಸಿದವರನ್ನು ಕೆಟ್ಟ ಕೆಟ್ಟ ಪದಗಳಿಂದ ಬೈಯುತ್ತಾ ಹಣ ವಸೂಲಿ ಮಾಡದೆ ಮುಂದೆ ತೆರಳಲಿಲ್ಲ. [ಕುಂಡೆ ಹಬ್ಬ ಹೇಗೆ ಆಚರಿಸುತ್ತಾರೆ? ಸಂಪೂರ್ಣ ವಿವರ ಇಲ್ಲಿದೆ]
ಗೋಣಿಕೊಪ್ಪಲು, ಪೊನ್ನಂಪೇಟೆ, ಪಾಲಿಬೆಟ್ಟ, ಕುಟ್ಟ ಅಲ್ಲದೆ ಜಿಲ್ಲೆಯ ಹೊರಭಾಗಗಳಿಂದ ವಿವಿಧ ನಮೂನೆಯ ವೇಷ ಭೂಷಣಗಳನ್ನು ಧರಿಸಿ ಬಂದಿದ್ದವರು ಕೈಯಲ್ಲಿ ಸೊರೆಕಾಯಿಯನ್ನು ಹನುಮಂತನ ಗದೆಯಂತೆ ಭುಜದ ಮೇಲಿಟ್ಟು ವೀರಾವೇಶದಲ್ಲಿ ಹೊರಟರೆ, ಕೆಲವರು ತಗಡಿನ ಡಬ್ಬಗಳಿಗೆ ಬಡಿಯುತ್ತಾ ಕುಣಿಯುತ್ತಾ ಹೆಜ್ಜೆ ಹಾಕಿದರು.
ಈ ಬಾರಿ ನಿತ್ಯಾನಂದನ ಹಾಗೂ ಸಿನಿಮಾ ನಟಿಯ ವೇಷದಲ್ಲಿ ಮಿಂಚುವ ಮೂಲಕ ಬುಡಕಟ್ಟು ಮಂದಿ ನಮಗೂ ವಿದ್ಯಮಾನಗಳ ಅರಿವಿದೆ ಎಂಬುವುದನ್ನು ಸಾರಿ ಹೇಳಿದರು. ಸಂಜೆ ದೇವರಪುರಕ್ಕೆ ತೆರಳಿದ ವೇಷಧಾರಿಗಳು ಅಲ್ಲಿನ ಅಯ್ಯಪ್ಪ ಭದ್ರಕಾಳಿ ದೇವಾಲಯದ ಪೂಜೆಯಲ್ಲಿ ಪಾಲ್ಗೊಂಡು ಜನರಿಗೆ, ದೇವರಿಗೆ ಬೈದುದಕ್ಕೆ ತಪ್ಪಾಯಿತೆಂದು ಕ್ಷಮೆ ಕೇಳಿದರು.