ರಾಜ್ಯಪಾಲರ ರಾಜೀನಾಮೆಗೆ ಕಾಂಗ್ರೆಸ್ ಬಣದಿಂದಲೇ ಆಗ್ರಹ
ಪಕ್ಷದ ಮುಖಂಡ, ಮಾಜಿ ಸಂಸದ ಪಿ.ಕೋದಂಡರಾಮಯ್ಯ, ಮುಖಂಡ ಬಿ.ಆರ್.ಪಾಟೀಲ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯಪಾಲರ ರಾಜೀನಾಮೆ ಪಡೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಲು ಸದ್ಯವೇ ದೆಹಲಿಗೆ ನಿಯೋಗ ಹೋಗುವುದಾಗಿ ಹೇಳಿದರು.
ಕಾಂಗ್ರೆಸ್ ನಾಯಕರು ಪದೇ ಪದೇ ರಾಜಭವನಕ್ಕೆ ಹೋಗುವುದನ್ನು ಬಿಟ್ಟು ಜನರ ಬಳಿಗೆ ಹೋಗಬೇಕಾಗಿತ್ತು. ಅದು ಮಾಡದಿರುವುದೇ ತಪ್ಪಾಗಿದೆ ಎಂದರು. ಪಕ್ಷದ ಮುಖಂಡ ಸುಭಾಷ್ಚಂದ್ರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ರಾಜ್ಯ ಬಿಜೆಪಿ ಸರ್ಕಾರವನ್ನು ವಜಾಗೊಳಿಸುವಂತೆ ಮಾಡಿದ ಎರಡನೇ ಬಾರಿ ಶಿಫಾರಸನ್ನು ತಳ್ಳಿ ಹಾಕುವುದರ ಮೂಲಕ ಕೇಂದ್ರ ಯುಪಿಎ ಸರ್ಕಾರ ಸರಿಯಾದ ನಿರ್ಧಾರವನ್ನೇ ಕೈಗೊಂಡಿದೆ. ಇಂತಹ ಕ್ರಮದ ಮೂಲಕ ರಾಜ್ಯಪಾಲರು ಜೋಕರ್ ಅಂತೆ ವರ್ತಿಸಿದ್ದಾರೆ. ಅಧಿವೇಶವನ್ನು ಕರೆಯುವ ಸಂಬಂಧ ಸಂಪುಟದ ನಿರ್ಧಾರವನ್ನು ಮಾನ್ಯ ಮಾಡದೇ ಇರುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಅಧಿವೇಶನ ನಡೆಸಲು ರಾಜ್ಯಪಾಲರು ಏಕೆ ಅಡ್ಡಿಪಡಿಸಿದರು ಎಂದು ಈ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ದೇವೇಗೌಡರ ತಾಳಕ್ಕೆ ತಕ್ಕಂತೆ ಕುಣಿದು ಹಾಳಾಗಬೇಡಿ ಎಂದು ಕಾಂಗ್ರೆಸ್ ನಾಯಕರಿಗೆ ಕಿವಿ ಮಾತು ಹೇಳಿದ ಅವರು, ಗೌಡರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬೇರೆಯವರನ್ನು ಬಳಸಿಕೊಳ್ಳುತ್ತಾರೆ. ತಮಗೆ ಯಾವಾಗ ಯಾರು ಉಪಯೋಗ ಆಗುವುದಿಲ್ಲವೋ ಆಗ ಕಿತ್ತು ಬಿಸಾಕುತ್ತಾರೆ. ಇದು ಕಾಂಗ್ರೆಸ್ ನಾಯಕರಿಗೆ ತಿಳಿದಿರಬೇಕು ಎಂದು ಹೇಳಿದರು.