ಹೆದರಬೇಡಿ, ಜಗತ್ ಪ್ರಳಯ ದಿನಾಂಕ ಮುಂದೂಡಲಾಗಿದೆ
ಹೀಗಂತ ಭವಿಷ್ಯ ನುಡಿದವನು ಕ್ಯಾಲಿಫೋರ್ನಿಯಾದ ಚರ್ಚ್ ಪಾದ್ರಿ ಹೆರಾಲ್ಡ್ ಕಾಂಮ್ನಿಗ್. ಆತನಿಗೆ ಲೆಕ್ಕವಿಲ್ಲದಷ್ಟು ಬೆಂಬಲಿಗರು, ಅನುಯಾಯಿಗಳಿದ್ದಾರೆ. ಅವರೆಲ್ಲ ನಂಬಿಬಿಟ್ಟರು. ರಕ್ಷಕನಾದ ಕ್ರೈಸ್ತ ಜೀವಜಗತ್ತನ್ನು ಕಾಪಾಡಲೆಂದು ಇಂದು ಅವತರಿಸಿ ಬರಲಿದ್ದಾನೆ ಎಂದು ಕ್ರೈಸ್ತ ಸಮೂಹ ಕಾದು ಕುಳಿತಿತ್ತು
ಎಚ್ಚರಿಕೆ ಇಂದು ಜಗತ್ತೇ ಅಂತ್ಯವಾಗುತ್ತದೆ ಎಂದು ರೆಡಿಯೊ, ಟಿವಿ ಬಿತ್ತರಿಸಲಾರಂಬಿಸಿತ್ತು. ಸಾಯುತ್ತೇವೆ ಎಂದು ಭಾವಿಸಿ ಎಲ್ಲಾ ಮುಗಿಸಿ ಕುಳಿತ್ತಿದ್ದವರಿಗೆ ಅಚ್ಚರಿಯಾಗಿತ್ತು. ಯಾಕೆಂದರೆ ಮೇ 21 ಎಂದಿನಂತೆ ಮುಗಿದಿತ್ತು. [ಓದಿ: ಮೇ 21 : ಪ್ರಳಯ, ಕ್ರಿಸ್ತನ ನಿರೀಕ್ಷೆಯಲ್ಲಿ ಅಮೆರಿಕ!]
ಒಂದು ಕಡೆ ಬದುಕಿದೆ ಬಡಜೀವವೇ ಎಂಬ ನೆಮ್ಮದಿ. ಮತ್ತೊಂದೆಡೆ ಪಾದ್ರಿಯ ಮೇಲಿರುವ ನಂಬಿಕೆ. ಆದರೂ ಆತನ ಬಳಿ ಹೆಚ್ಚಿನವರು ಬಂದು "ಏನ್ ಸ್ವಾಮಿ, ಭೂಮಿ ಅದೇ ರೀತಿ ಇದೆಯಲ್ವ" ಅಂತ ಪ್ರಶ್ನಿಸಿದ್ದಾರೆ. ತಕ್ಷಣ ಆತ ಬೈಬಲ್, ಗ್ರಂಥಗಳನ್ನು, ಹಳೆಯ ರದ್ದಿ ಪುಸ್ತಕದಲ್ಲಿ ಟಿಕ್ ಮಾಡಿಟ್ಟಿದ್ದ ಅಂಕಿ ಅಂಶಗಳ ಪುನರ್ ಅವಲೋಕನ ಮಾಡಿದ್ದಾನೆ.
ಇನ್ನೇನೂ ಕಾದಿದೆಯೋ ಅಂತ ಆತನ ಬೆಂಬಲಿಗರು, ಅನುಯಾಯಿಗಳು ಆತನ ಮುಂದೆ ತಲೆ ಬಗ್ಗಿಸಿಕುಳಿತಿದ್ದರು. ಇಂದು ಆತ ಮತ್ತೆ ಬಾಯಿ ತೆರೆದಿದ್ದಾನೆ. ಜಗತ್ತಿನ ದೊಡ್ಡ ವರ್ಗವೊಂದು ಆತನ ಬ್ರಹ್ಮಾಂಡ ಬಾಯಿಂದ ಬಿದ್ದ ಸುದ್ದಿ ಕೇಳಿ ಬಿದ್ದುಬಿದ್ದು ನಕ್ಕಿದ್ದಾರೆ.
ಇದೀಗ ಬಂದ ಸುದ್ದಿ ಪ್ರಕಾರ, ಈ ಪ್ರಳಯವನ್ನು ಮುಂದೂಡಲಾಗಿದೆ. ಹಾಗಂತ ಹೆರಾಲ್ಡ್ ಪ್ರಕಟಿಸಿದ್ದಾನೆ. ಹೊಸ ದಿನಾಂಕ ಯಾವುದು ಅಂದ್ರೆ "ಅಕ್ಟೋಬರ್ 21" ಅಂತೆ. ಮತ್ತೆ ಸಾವಿನ ಭಯದಲ್ಲಿ ಹೆಚ್ಚಿನವರು ಮತ್ತೆ ಸಾಮೂಹಿಕ ಪ್ರಾರ್ಥನೆ ಆರಂಭಿಸಿದ್ದಾರೆ.
ಈತ ಪ್ರಳಯ ಭವಿಷ್ಯ ನುಡಿಯುತ್ತಿರುವುದು ಇದು ಮೊದಲಲ್ಲ. 1994ರಲ್ಲಿ ಈ ಕುರಿತು ವಿಶ್ವ ಅಂತ್ಯವಾಗುವ ಕುರಿತು ಪುಸ್ತಕವೊಂದನ್ನು ಬರೆದಿದ್ದ. ಈತನಿಗೆ 89 ವರ್ಷ ವಯಸ್ಸಾಗಿರುವುದರಿಂದ ಹೆಚ್ಚು ವರ್ಷ ಜನರು ಪ್ರಳಯ ಭೀತಿಯಲ್ಲಿ ಕಳೆಯಬೇಕಿಲ್ಲ.