ರಾಜ್ಯಪಾಲರ ರಾಷ್ಟ್ರಪತಿ ಆಳ್ವಿಕೆ ಶಿಫಾರಸು ಕಸದಬುಟ್ಟಿಗೆ
ರಾಜ್ಯಪಾಲರ ಶಿಫಾರಸನ್ನು ತಿರಸ್ಕರಿಸಿರುವ ಪತ್ರವನ್ನು ಅಧಿಕೃತವಾಗಿ ರವಾನಿಸಲಾಗಿದ್ದು, ಕರ್ನಾಟಕದಲ್ಲಿ ಬಿಜೆಪಿ ನಿರಾಳವಾಗಿ ಉಸಿರಾಡುವಂತಾಗಿದೆ ಮತ್ತು ಯಡಿಯೂರಪ್ಪ ಐದನೇ ಬಾರಿ ಜೀವದಾನ ಪಡೆದಂತಾಗಿದೆ. ಪ್ರಧಾನಿ ನೇತೃತ್ವದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಶಿಫಾರಸನ್ನು ಕೇಂದ್ರ ತಿರಸ್ಕರಿಸಿದೆಯಾದರೂ ರಾಜ್ಯದ ಆಡಳಿತದಲ್ಲಿ ಬದಲಾವಣೆಗಳನ್ನು ತರಲು ಕೆಲ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.
ಸಭೆಯ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಪಿ. ಚಿದಂಬರಂ ಅವರು, ರಾಜ್ಯಪಾಲ ಭಾರದ್ವಾಜ್ ಅವರು ಕಳಿಸಿದ್ದ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ, ಅವರ ಶಿಫಾರಸುಗಳನ್ನು ಸ್ವೀಕರಿಸದಿರಲು ಕೇಂದ್ರ ನಿರ್ಧರಿಸಿದೆ ಎಂದರು. ಆದರೆ, ರಾಜ್ಯಪಾಲರ ಪತ್ರದಲ್ಲಿದ್ದ ಅಂಶಗಳನ್ನು ಕೇಂದ್ರ ಪರಿಗಣಿಸಿದ್ದು, ರಾಜ್ಯ ಈ ಅಂಶಗಳ ಬಗ್ಗೆ ಗಮನಹಸುತ್ತದೆಂದು ಕೇಂದ್ರ ನಂಬಿದೆ ಎಂದು ಅವರು ಯಡಿಯೂರಪ್ಪನವರಿಗೆ ಸೂಚನೆ ನೀಡಿದರು.
16 ಶಾಸಕರ ಅನರ್ಹತೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ನಂತರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಶಿಫಾರಸು ಮಾಡಿ ಕೇಂದ್ರಕ್ಕೆ ಪತ್ರ ಬರೆದಿದ್ದ ಹಂಸರಾಜ್ ಭಾರದ್ವಾಜ್ ಅವರಿಗೆ ಇದರಿಂದ ಭಾರೀ ಮುಖಭಂಗವಾದಂತಾಗಿದೆ. ಕೇಂದ್ರ ಕೂಡ ಒಂದು ವಾರ ಕಳೆದ ನಂತರ ಸಾಧ್ಯಾಸಾಧ್ಯತೆಗಳನ್ನು ಅಳೆದು ತೂಗಿ, ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರನ್ನು ಸಾಕಷ್ಟು ಗೋಳು ಹೊಯ್ದುಕೊಂಡು ಈ ನಿರ್ಧಾರಕ್ಕೆ ಬಂದಿದೆ.
ಶಿಫಾರಸು ತಿರಸ್ಕರಿಸಿದ್ದಕ್ಕೆ ಕೇಂದ್ರ ನೀಡಿರುವ ಕಾರಣಗಳ ವಿವರ ಇನ್ನೂ ತಿಳಿಯಬೇಕಿದೆ. ಆದರೆ, ಜನರಿಂದ ಬಹುಮತ ಪಡೆದು ಆಯ್ಕೆಯಾದ ಸರಕಾರವನ್ನು ವಜಾಗೊಳಿಸುವುದು ಅಷ್ಟು ಸುಲಭವಾದ ಮಾತಲ್ಲ ಎಂಬ ಸಂಗತಿಯಂತೂ ಕೇಂದ್ರಕ್ಕೆ ಮನವರಿಕೆಯಾಗಿರುವುದು ಇದರಿಂದ ಸಾಬೀತಾಗಿದೆ. ಇಷ್ಟೆಲ್ಲ ಆದ ಮೇಲೆ ರಾಜ್ಯಪಾಲರ ಮುಂದಿನ ನಡೆಯೇನು?
ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ ನಂತರ ಸರಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ನಾನಾ ಕಸರತ್ತು ಮಾಡಿತ್ತು. ಕೇಂದ್ರಕ್ಕೆ, ರಾಷ್ಟ್ರಪತಿಗೆ ಪತ್ರ ಬರೆದು, ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್ ಮುಂದೆ ಪರೇಡ್ ಕೂಡ ಮಾಡಿತ್ತು. ಕೇಂದ್ರದಿಂದ ಕೂಡಲೆ ಸಕಾರಾತ್ಮಕ ಪ್ರತಿಕ್ರಿಯೆ ಬಾರದ್ದರಿಂದ ರಾಜ್ಯವ್ಯಾಪಿ ಆಂದೋಲನವನ್ನು ಆರಂಭಿಸಿತ್ತು. ಜಂಟಿ ಅಧಿವೇಶನ ನಡೆಸಲು ಬಿಜೆಪಿಗೆ ಅನುಮತಿ ನೀಡಲು ರಾಜ್ಯಪಾಲರು ಸತಾಯಿಸಿದ್ದು ಗಾಯದ ಮೇಲೆ ಉಪ್ಪು ಸುರಿದಂತಾಗಿತ್ತು.