ಉಗ್ರಪ್ಪ ಮತ್ತು ಸಿಎಂ ಇಬ್ರಾಹಿಂ ಎಲ್ಲಿ ಹೋದರು?
ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿ ಒಂದು ವಾರ ಕಳೆದಿದೆ. ಬಿಜೆಪಿ ಹಂಸರಾಜ್ ಭಾರದ್ವಾಜ್ ತಲೆದಂಡಕ್ಕೆ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದ್ದರೆ, ಕಾಂಗ್ರೆಸ್ ವಿರೋಧ ಪಕ್ಷವಾಗಿ ನಾವು ಇನ್ನೂ ಬದುಕಿದ್ದೇವೆ ಎಂದು ತಿಳಿಪಡಿಸಲು ಶತಪ್ರಯತ್ನ ಮಾಡುತ್ತಿದೆ. ಜೆಡಿಎಸ್ ಸುಮ್ಮನೆ ಇವೆರಡು ಪಕ್ಷಗಳ ತಮಾಷೆಯ ಹೊಡದಾಟ ನೋಡಿಕೊಂಡು ಮಜಾ ಮಾಡುತ್ತಿದೆ. ಇಡೀ ದೇಶ ಇವರೆಲ್ಲರ ಪ್ರಹಸನ ನೋಡಿ ನಗಾಡುವಂತಾಗಿದೆ. [ಯಡಿಯೂರಪ್ಪ-ಭಾರದ್ವಾಜ್ ಮಹಾಭಾರತ]
ನಿತ್ರಾಣ ಯೋಧರ ಹೋರಾಟ : ಈಶ್ವರಪ್ಪ ಗಂಟಲು ಕಿತ್ತುಹೋಗುವಂತೆ ಕಿರುಚಾಡುತ್ತಿದ್ದಾರೆ. ಯಡಿಯೂರಪ್ಪ ಟೇಪ್ ರೆಕಾರ್ಡರ್ ಆನ್ ಮಾಡಿಕೊಂಡಂತೆ ಭಾಷಣ ಒಪ್ಪಿಸುತ್ತಿದ್ದಾರೆ. ರಾಜ್ಯಪಾಲರಂತೂ ತುಟಿ ಪಿಟಕ್ ಅನ್ನದೆ ಬಾಯಿ ಮೇಲೆ ಬೆರಳು ಇಟ್ಟು ಗಪ್ ಚಿಪ್ ಕುಳಿತಿದ್ದಾರೆ. ಇವರಿಬ್ಬರ ನಡುವಿನ ಕಾಳಗ ಯಾವುದೇ ಶಸ್ತ್ರಾಸ್ತವಿಲ್ಲದಿದ್ದರೂ ನಿತ್ರಾಣರಾದ ಯೋಧರ ಹೋರಾಟದಂತೆ ಕಾಣುತ್ತಿದೆ. ಜನರಲ್ಲಿ ಸ್ಫೂರ್ತಿ ತುಂಬುವಂತಹ ಭಾಷಣಗಳಿಲ್ಲ, ರೊಚ್ಚಿಗೆಬ್ಬಿಸುವಂತಹ ಹೂಂಕಾರವಿಲ್ಲ.
ಬೋರೇಗೌಡರ ಸಪ್ಪೆಸಪ್ಪೆ ಭಾಷಣ ಕೇಳಿ ಕೇಳಿ ಕೇಳಿ... ಜನರು ಬೋರು ಹೊಡೆದು ಹೋಗಿದ್ದಾರೆ. ಚಪ್ಪಾಳೆಗಳಿಲ್ಲ, ಶಿಳ್ಳೆಗಳಿಲ್ಲ, ಜೈಕಾರವಿಲ್ಲ, ಧಿಕ್ಕಾರವೂ ಇಲ್ಲ. ಮಾತುಗಳಲ್ಲಿ ಪ್ರಖರತೆ, ದಿಟ್ಟತನ, ವಿರೋಧಿಗಳನ್ನು ಬೆಚ್ಚಿಬೀಳಿಸುವಂಥ ಭಂಡತನ, ಸಿದ್ಧಾಂತ ಮಣ್ಣುಮಸಿ ಇಂದಿನ ಯಾವುದೇ ರಾಜಕಾರಣಿಗಳಲ್ಲೂ ಇಲ್ಲ. ವಿನಾಶಕಾಲದ ಅಂಚಿಗೆ ಬಂದಿರುವ ನಿರಾಶಾವಾದಿಗಳಂತೆ ಪೊಳ್ಳು ಭಾಷಣ ಬಿಗಿಯುತ್ತಿರುವುದನ್ನು ನೋಡಿ ಜನರೇ ರೋಸಿಹೋಗುವಂತಾಗಿದೆ.
ಉಗ್ರಪ್ಪ, ಇಬ್ರಾಹಿಂ ಎಲ್ಲಿ? : ತಮಾಷೆಯಾಗಿ ಮಾತನಾಡಿದರೂ ನಾಲ್ಕು ಚಪ್ಪಾಳೆ ಗಿಟ್ಟಿಸಿಕೊಳ್ಳುವ ತಾಕತ್ತುಳ್ಳ ಕಾಂಗ್ರೆಸ್ ನಾಯಕ, ಸಿದ್ದರಾಮಯ್ಯ ಹಿಂಬಾಲಕ ಸಿಎಂ ಇಬ್ರಾಹಿಂ ಎಲ್ಲಿ? ಉಗ್ರ ಮಾತುಗಳಿಂದಲೇ ವಿರೋಧಿಗಳ ರುಂಡ ಚೆಂಡಾಡುವ ಉಗ್ರಪ್ರತಾಪಿ ಉಗ್ರಪ್ಪನವರೆಲ್ಲಿ? ಸಂಯಮದಿಂದ ಮಾತಾಡುವ, ಆದರೆ ಜನರನ್ನು ಬಡಿದೆಬ್ಬಿಸುವ ರಮೇಶ್ ಕುಮಾರ್ ಎಲ್ಲಿ? ಇನ್ನು ತಮ್ಮ ಚೇಷ್ಟೆಗಳಿಂದಲೇ ಜನರ ಪ್ರೀತಿಗೆ ಪಾತ್ರರಾಗಿರುವ ವಾಟಾಳ್ ನಾಗರಾಜ್ ಎಲ್ಲಿ? ನಾರಾಯಣ ಗೌಡರು ಎಲ್ಲಿ ಹೋಗಿದ್ದಾರೆಂದು ಕರ್ನಾಟಕ ರಕ್ಷಣಾ ವೇದಿಕೆಯವರೇ ಹುಡುಕಿ ಕೊಡಬೇಕು.
ಮಳ್ಳೂರು ಆನಂದ ರಾವ್, ರಾಮಕೃಷ್ಣ ಹೆಗಡೆ, ಜೆಎಚ್ ಪಟೇಲ್, ರಮೇಶ್ ಕುಮಾರ್ ಅವರಂಥ ಪ್ರಖರ ವಾಗ್ಮಿಗಳನ್ನು ಕರ್ನಾಟಕ ನೋಡಿದೆ. ಈಗಿನವರು ಅವರ ನೆರಳಿಗೂ ಸಮನಲ್ಲ. ಮಾತಾಡುತ್ತಿದ್ದರೆ ಕೇಳುಗರೆಲ್ಲ ಮೈಯೆಲ್ಲ ಕಿವಿಯಾಗುವಂಥ ಭಾಷಣಕಾರರು ಒಬ್ಬರೂ ಉಳಿದಿಲ್ಲ. ಕುದುರೆ ವ್ಯಾಪಾರಕ್ಕೆ ಪ್ರಸಿದ್ಧವಾಗಿರುವ ಕರ್ನಾಟಕದಲ್ಲಿ ಉಗ್ರಪ್ಪ, ಸಿಎಂ ಇಬ್ರಾಹಿಂರಂಥವರು ತೆರೆಮರೆಗೆ ಸರಿದಿರುವುದು ಅವರ ಮೇಲೆಯೇ ಅನುಮಾನ ಬರುವಂತೆ ಮಾಡಿದೆ. ಇನ್ನಾದರೂ ಅವರು ಅಖಾಡಕ್ಕೆ ಬರಲಿ. ಬೋರೆದ್ದು ಹೋದ ಭಾಷಣಗಳಿಗೆ ಭೂಷಣ ತರಲಿ.