ಮೇ 24ರಂದು ರಂಗಶಂಕರದಲ್ಲಿ ಮಾಯಾಮೃಗ ನಾಟಕ
ಪೂಚಂತೆ (ಕೆ. ಪಿ. ಪೂರ್ಣಚಂದ್ರ ತೇಜಸ್ವಿ)ಯವರ ಸಣ್ಣಕಥೆ ಆಧಾರಿತ ನಾಟಕ 'ಮಾಯಾಮೃಗ. ಮೆದುಳಿನ ಮೂಲೆಯಲ್ಲಿ ಕೂತಿರುವ ದೆವ್ವ-ಭೂತಗಳ ಕಲ್ಪನೆ ಮಾನವನ ಮನಸ್ಸಿನಲ್ಲಿ ಹೇಗೆ ಕೆಲಸ ಮೂಡುತ್ತದೆ ಎಂಬುದೇ ನಾಟಕದ ಸತ್ವ. ಈ ನಾಟಕ ಜೆಪಿ ನಗರದ ರಂಗಶಂಕರದಲ್ಲಿ ಮೇ 24, ಮಂಗಳವಾರ ಸಂಜೆ 7.30ಕ್ಕೆ ಪ್ರದರ್ಶಿತವಾಗುತ್ತಿದೆ. ಟಿಕೆಟ್ ಬೆಲೆ ರು. 100.
'ಮಾಯಾಮೃಗ' ಹೆಸರೇ ಸೂಚಿಸುವಂತೆ ಒಂದು ಮಾಯೆಯ ಪ್ರಾಣಿ, ತೇಜಸ್ವಿ ಮತ್ತು ಅವರ ಸ್ನೇಹಿತರು ಒಂದು ಸ್ಮಶಾನದಲ್ಲಿ ದೆವ್ವವನ್ನು ಹುಡುಕಿಕೊಂಡು ಹೊರಟ ಕಥೆ ಇದಾಗಿದೆ. ದಾರಿಯಲ್ಲಿ ಅವರು ಕಂಡ ಕಜ್ಜಿ ಹಿಡಿದ ನಾಯಿಮರಿ ಅವರಿಗೆ ಒಂದು ದೆವ್ವವಾಗಿ ಕಂಡಂತಾಗುತ್ತದೆ. ಇಂಥಹ ಹಲವಾರು ಜೀವನದ ಘಟನೆಗಳ ಸರಮಾಲೆಯೇ ಹಾಸ್ಯಭರಿತ ನಾಟಕವಾಗಿ ಪ್ರದರ್ಶಿತವಾಗುತ್ತಿದೆ.
ಈ ನಾಟಕದ ಮೂಲಕ ಪ್ರೇಕ್ಷಕರಿಗೆ ಯಾವುದೇ ತತ್ವ ಸಿದ್ಧಾಂತಗಳನ್ನು ಹುಟ್ಟುಹಾಕುವುದಾಗಲೀ ಅಥವಾ ತೋರಿಸುವುದಾಗಲೀ ನಮ್ಮ ಉದ್ಧೇಶವಲ್ಲ ಎಂದು ನಿರ್ದೇಶಕ ಪೃಥ್ವಿ ಆರಾಧ್ಯ ತಿಳಿಸಿದ್ದಾರೆ. ತೇಜಸ್ವಿಯವರ ಜೀವನದ ಘಟನೆಗಳನ್ನು ರಂಗದಮೇಲೆ ತೋರಿಸುವುದಷ್ಟೇ ನಮ್ಮ ಕೆಲಸ. ನಾಟಕದಲ್ಲಿ ರಂಗವಿನ್ಯಾಸ, ಬೆಳಕು ಮತ್ತು ಸಂಗೀತದ ಮೂಲಕ ಪ್ರೇಕ್ಷಕರಿಗೆ ವಿಚಿತ್ರ, ವಿಶಿಷ್ಟ ಅನುಭವಗಳು ಸಿಗುವಂತೆ ಮಾಡುವ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ ಆರಾಧ್ಯ.
ಪಾತ್ರಧಾರಿಗಳಾಗಿ ಪ್ರದೀಪ್ ಬಿ.ವಿ., ಸುಜಯ್ ಶಾಸ್ತ್ರಿ, ಪ್ರವೀಣ್ ಬಿ.ವಿ., ವಿನಯ್ ಶಾಸ್ತ್ರಿ, ಭೂಪೇಶ ಬೆಳಗಲಿ, ಹರಿಪ್ರಸಾದ್, ಸತೀಶ್ ನಟಿಸಿದ್ದಾರೆ. ಬೆಳಕು ಮುಸ್ತಾಫ, ಸಂಗೀತ ರಾಜಗುರು ಹೊಸಕೋಟೆ, ವಿನ್ಯಾಸ ಸಂಘಟನೆ ಕಿರಣ್ ವಟಿ ಮತ್ತು ನಿರ್ದೇಶನ ಪೃಥ್ವಿ ಆರಾಧ್ಯ. ಹಾಸ್ಯಭರಿತವಾದ ಸಂಭಾಷಣೆಯೊಂದಿಗೆ ಮಾನವನ ಹುಚ್ಚು ಕಲ್ಪನೆಯ ವ್ಯಂಗ್ಯಗಳು ತೇಜಸ್ವಿಯವರ ಈ ಸಣ್ಣಕಥೆಯಲ್ಲಿ ಇದೆ.
ಟಿಕೆಟ್ ಬೆಲೆ 100 ರು. ಟಿಕೆಟ್ಗಳಿಗಾಗಿ 98806 95659 ಸಂಪರ್ಕಿಸಬಹುದಾಗಿದೆ.