ಬೆಂಗಳೂರು ಟ್ರಾಫಿಕ್ ನಿಯಂತ್ರಿಸುವ ಪುಣ್ಯಕೋಟಿ ಕಥೆಯಿದು
ನಗರದ ರಸ್ತೆ ನಡುವೆ ಎತ್ತರದ ದನವೊಂದು ಅಡ್ಡ ನಿಂತಿದೆ ಎಂದಿಟ್ಟುಕೊಳ್ಳಿ. ಪಾಂ ಪಾಂ.. ನೀವು ಎಷ್ಟು ಜೋರಾಗಿ ಹಾರ್ನ್ ಹೊಡೀರಿ.. ಊ..ಹೂಂ ಒಂಚೂರು ಕದಲುವುದೇ ಇಲ್ಲ. ಅದರ ಬೆನ್ನಿಗೊಂದು ಟಪ್ ಅಂತ ಹೊಡಿರಿ. ನಿಮ್ಮ ಕೈ ನೋವಾಗುತ್ತಿದೆಯೇ ಹೊರತು ಅದು ಕೇರೇ ಮಾಡೋದಿಲ್ಲ. ನಾವೇ ದಾರಿ ಮಾಡಿಕೊಂಡು ಹೋಗಬೇಕು. [ಇದನ್ನು ಓದಿ : ಬಸವನಗುಡಿ ರಸ್ತೆಯಲ್ಲಿ...]
ಮೊನ್ನೆ ಮಿನರ್ವ ಸರ್ಕಲ್ ಬಳಿ ಬರುತ್ತಿದ್ದೆ. ಟ್ರಾಫಿಕ್ ಜಾಮ್ ಆಗಿ ಬಿಟ್ಟಿತ್ತು. ಸಿಗ್ನಲ್ ಬೀಳದಿದ್ದರೂ ವಾಹನಗಳೆಲ್ಲ ನಿಂತಿವೆ. ಝೀಬ್ರಾ ಗೆರೆಯಲ್ಲಿ ಸಾಲಾಗಿ ದನಗಳು ಚಲಿಸುತ್ತಿವೆ. ಒಂದು ಎರಡು ಮೂರು.. ಲೆಕ್ಕ ಮಾಡಿ ಸಾಕಾಯ್ತು. 40ಕ್ಕೂ ಹೆಚ್ಚು ದನಗಳಿದ್ದವು. ಥೇಟ್ ನಂದಿನಿ ಹಾಲಿನ ಪ್ಯಾಕೆಟ್ ನಲ್ಲಿರುವ ಚಿತ್ರದಂತೆ ಇದ್ದವು. ಎಲ್ಲವೂ ಒಂದೇ ಎತ್ತರ.. ಒಂದೇ ಗಾತ್ರ.. ನಡೆಯುವ ಠೀವಿ ಕೂಡ ಒಂದೇ ರೀತಿ.
ಇಷ್ಟು ದನಗಳನ್ನು ಮೇಯಿಸುವ ಗೋಪಾಲ ಎಲ್ಲಿದ್ದಾನೆ ಅಂತ ಹುಡುಕಿದೆ. ಆಧುನಿಕ ಕಾಲದ ಗೋಪಾಲ ಬೈಸಿಕಲ್ ಮೇಲೆ ಕೈಯಲ್ಲೊಂದು ಬೆತ್ತ ಹಿಡಿದುಕೊಂಡು ದನಗಳ ಹಿಂದೆ ಬರುತ್ತಿದ್ದ. ಕೆಲವೊಮ್ಮೆ ಆತ ಟಿವಿಎಸ್ ಸ್ಕೂಟಿ ಮೇಲೆಯೂ ಬರುತ್ತಾನಂತೆ. ಅಂತೂ ಟ್ರಾಫಿಕ್ ಕ್ಲೀಯರ್ ಆಗಲು ಸರಿಯಾಗಿ ಹತ್ತು ನಿಮಿಷ ಹಿಡಿಯಿತು. ಅದೇ ಸಮಯದಲ್ಲಿ ಬೆಂಗಳೂರಿನಲ್ಲಿ ಇಷ್ಟೊಂದು ದನಗಳನ್ನು ಸಾಕಿದ್ದಾರಲ್ಲಪ್ಪಾ ಅಂತ ಆಶ್ಚರ್ಯವೂ ಆಯಿತು.
ಇದು ಬರೀ ಮಿನರ್ವ ಸರ್ಕಲ್ ಬಳಿಯ ಕತೆಯಲ್ಲ. ನಗರದ ಎಲ್ಲ ಕಡೆಯೂ ಪುಣ್ಯಕೋಟಿಗಳು ರಸ್ತೆಯನ್ನೇ ಹಟ್ಟಿ ಮಾಡಿಕೊಳ್ಳುತ್ತವೆ. ಕೆಲವೊಮ್ಮೆ ಆಶ್ಚರ್ಯವಾಗುತ್ತದೆ. ಹಳ್ಳಿಯಲ್ಲಾದರೆ ಈ ದನಗಳಿಗೆ ಮೇಯಲು ಕಾಡುಗಳಿವೆ. ರಸ್ತೆ ಬದಿಯಲ್ಲಿ ಪೊದೆಯನ್ನಾದರೂ ಮೇಯುತ್ತವೆ. ಆದರೆ ನಗರದ ದನಗಳಿಗೆ ಉದ್ಯಾನನಗರಿಯಲ್ಲಿ ಹುಲ್ಲು ಎಲ್ಲಿ ದೊರಕುತ್ತದೆ? ನಾನಂತು ಕಂಡಿಲ್ಲ.
ಮನೆಮನೆಗೆ ಹಾಲು ಮಾರುವ ಗೋಪಮ್ಮನಿಂದ ನನ್ನ ಸ್ನೇಹಿತನೊಬ್ಬ ಹಾಲು ಖರೀದಿಸೋದನ್ನು ಬಿಟ್ಟಿದ್ದಾನೆ. ಅದಕ್ಕೆ ಅವನು ಕೊಡೋ ಕಾರಣವೆಂದರೆ ಈ ನಗರದ ದನಗಳು ಏನೇನೋ ತಿನ್ನುತ್ತವೆ. ಅದಕ್ಕಿಂತ ಪ್ಯಾಕೆಟ್ ಹಾಲು ಕುಡಿಯೋದು ಉತ್ತಮ ಅಂತ. ಏನಂತೀರಿ? ನಾನಂತೂ ಒಪ್ಪಲ್ಲ, ನೀವು?