ರಾಜ್ಯದ ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಬೆದರಿಕೆ
ರಾಜ್ಯ ಬಿಜೆಪಿ ಸರಕಾರವನ್ನು ಕಿತ್ತೋಗೆಯಲು ಮತ್ತು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಕೇಂದ್ರವನ್ನು ಒತ್ತಾಯಿಸುವ ಉದ್ದೇಶದಿಂದ ಸಾಮೂಹಿಕ ರಾಜಿನಾಮೆ ನೀಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. "ಇಂದು ಸಂಜೆ ನಡೆಯುವ ಸಭೆಯಲ್ಲಿ ಈ ಕುರಿತು ಸ್ಪಷ್ಟ ನಿಲುವು ತೆಗೆದುಕೊಳ್ಳಲಾಗುವುದು" ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕಿ ಮೋಟಮ್ಮ ಹೇಳಿದ್ದಾರೆ.
"ಸಾಮೂಹಿಕ ರಾಜಿನಾಮೆ ನೀಡುವುದು ಅತ್ಯಂತ ಉತ್ತಮ ನಿರ್ಧಾರ. ನಾನಂತು ಅದಕ್ಕೆ ಸಿದ್ಧಳಿದ್ದೇನೆ" ಎಂದು ಮೋಟಮ್ಮ ಹೇಳಿದ್ದಾರೆ. ಸುಪ್ರಿಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಬಿಜೆಪಿ ಸರಕಾರವನ್ನು ಕಿತ್ತೋಗೆದು ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಕೇಂದ್ರದ ಮೇಲೆ ಆಗ್ರಹಿಸುತ್ತ ಕಾಂಗ್ರೆಸ್ ಶಾಸಕರು ಮತ್ತು ಕಾರ್ಯಕರ್ತರು ಇಂದು ಕೂಡ ಧರಣಿ ಮುಂದುವರೆಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಅಳಿವು-ಉಳಿವಿನ ನಿರ್ಧಾರದ ಅಂತಿಮ ಹಂತ ಸಮೀಪಿಸಿರುವ ಹಿನ್ನೆಲೆಯಲ್ಲಿ ತನ್ನ ಹೈಕಮಾಂಡ್ ಮೇಲೆ ಒತ್ತಡ ಹೇರಲು ರಾಜ್ಯ ಕಾಂಗ್ರೆಸ್ ನಾಯಕರು ನಿನ್ನೆಯೇ ತಯಾರಿ ನಡೆಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಿನ್ನೆ ರಾತ್ರಿ ಸಭೆ ಸೇರಿದ ಪಕ್ಷದ ಹಿರಿಯ ನಾಯಕರು ಸಾಮೂಹಿಕ ರಾಜಿನಾಮೆ ಕುರಿತು ಚರ್ಚಿಸಿದ್ದರು.