ಯಡ್ಡಿ ಪದಚ್ಯುತಿಗೆ ಬಿಜೆಪಿಯಿಂದಲೇ ಪಿತೂರಿ : ಡಿಕೆಶಿ
ಡಿಕೆ ಶಿವಕುಮಾರ್ ಹೇಳಿದ್ದೇನೆಂದರೆ, "ರಾಜ್ಯದ ನಾಯಕರು ಮಾತ್ರವಲ್ಲ ರಾಷ್ಟ್ರೀಯ ನಾಯಕರು ಕೂಡ ಮೇಲಿಂದ ಮೇಲೆ ದೂರವಾಣಿ ಮಾಡುತ್ತಿದ್ದು, ಯಡಿಯೂರಪ್ಪ ನಾಯಕತ್ವದ ವಿರುದ್ಧ ಹೋರಾಟ ಮುಂದುವರಿಸುವಂತೆ ಒತ್ತಾಯಿಸುತ್ತಿದ್ದಾರೆ. ಶೇ.60ರಷ್ಟು ಶಾಸಕರು ನಾಯಕತ್ವದ ಬದಲಾವಣೆ ಬಯಸುತ್ತಿದ್ದಾರೆ. ಆದರೆ ಬಹಿರಂಗವಾಗಿ ಹೇಳಲು ಹಿಂಜರಿಯುತ್ತಿದ್ದಾರೆ."
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ಧನಂಜಯ ಕುಮಾರ್ ಅವರು, "ನಾಯಕತ್ವ ಬದಲಾವಣೆಯ ಬೇಡಿಕೆಯ ಬಗ್ಗೆ ಡಿಕೆಶಿ ಪುರಾವೆ ನೀಡಲಿ. ಚುನಾವಣೆಯಲ್ಲಿನ ಸೋಲಿನ ಹತಾಶೆಯಿಂದ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರು ಅವರಿಂದ ಈ ರೀತಿಯ ಮಾತು ಆಡಿಸುತ್ತಿದ್ದಾರೆ. ಅವರ ಪಕ್ಷದಲ್ಲಿಯೇ ಸಾಕಷ್ಟು ಒಡಕುಗಳಿವೆ. ಅದನ್ನು ಮರೆಮಾಚಲು ಹೀಗೆಲ್ಲ ಹೇಳುತ್ತಿದ್ದಾರೆ" ಎಂದಿದ್ದಾರೆ. [ಕೆಪಿಎಲ್ : ಯಡಿಯೂರಪ್ಪ vs ಭಾರದ್ವಾಜ್]
ಇದಕ್ಕೆ ಪ್ರತಿಯಾಗಿ ಡಿಕೆಶಿ, ಪುರಾವೆ ಏನು ನೀಡುವುದು? ಬೇಕಿದ್ದರೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಿ, ಕೋರ್ಟಿನಲ್ಲಿಯೇ ಹೆಸರುಗಳನ್ನು ಬಹಿರಂಗಪಡಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ. ಆದರೆ, ಈ ಸವಾಲನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿರುವ ಧನಂಜಯಕುಮಾರ್, ಡಿಕೆಶಿ ಮಾತನ್ನು ನಂಬುವುದು ಮೂರ್ಖತನದ ಪರಮಾವಧಿ ಎಂದಷ್ಟೇ ಹೇಳುತ್ತಿದ್ದಾರೆ. ಡಿಕೆಶಿ ಹೇಳಿದಂತೆ ಬಿಜೆಪಿ ನಾಯಕರು ಒತ್ತಡವನ್ನು ನನ್ನ ಮೇಲಂತೂ ಹೇರಿಲ್ಲ ಎಂದು ಡಿಕೆಶಿ ಮೇಲೆಯೇ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ನರೇಂದ್ರ ಮೋದಿ ಒತ್ತಾಯ : ಜನರಿಂದ ಬಹುಮತ ಪಡೆದು ಆಯ್ಕೆಯಾಗಿರುವ ಬಿಜೆಪಿ ಸರಕಾರವನ್ನು ಕೆಡವುವ ಉದ್ದೇಶದಿಂದ ಕರ್ನಾಟಕದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಅಸಂವಿಧಾನಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಡಳಿತವನ್ನು ದಿಕ್ಕುತಪ್ಪಿಸುತ್ತಿರುವ ಭಾರದ್ವಾಜ್ ಅವರನ್ನು ಕೂಡಲೆ ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಮುಗಿದ ಗಡುವು, ಮುಂದೇನು? : ಇಂದು ಸಂಜೆಯ ಒಳಗೆ ಜಂಟಿ ಅಧಿವೇಶನ ನಡೆಸಲು ಅನುಮತಿ ನೀಡದಿದ್ದರೆ ರಾಜ್ಯವ್ಯಾಪಿ ಹೋರಾಟ ಚುರುಕುಗೊಳಿಸುವುದಾಗಿ ಯಡಿಯೂರಪ್ಪ ರಾಜ್ಯಪಾಲರಿಗೆ ಎಚ್ಚರಿಸಿದ್ದರು. ಸಂಜೆಯ ಗಡುವು ಮುಗಿಯುತ್ತ ಬಂದಿದ್ದರೂ ರಾಜಭವನದಿಂದ ಯಾವುದೇ ಸೂಚನೆ ಬಂದಿಲ್ಲ. ಇನ್ನೆರಡು ದಿನ ಕಾಯಿರಿ ಎಂದು ರಾಜ್ಯಪಾಲರು ಹೇಳಿದ್ದರೂ ಕಾಯಲು ಬಿಜೆಪಿ ತಯಾರಿಲ್ಲ. ಹಾಗಿದ್ದರೆ ಬಿಜೆಪಿಯ ಮುಂದಿನ ನಡೆಯೇನು?