ಇಂದು ಯಡಿಯೂರಪ್ಪ-ಭಾರದ್ವಾಜ್ ಮುಖಾಮುಖಿ?
ಅಲ್ಲಿಗೆ, ಕಳೆದೊಂದು ವಾರದಿಂದ ವಿಮುಖರಾಗಿರುವ ರಾಜ್ಯದ ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಮುಖಾಮುಖಿಯಾಗುವುದು ನಿಕ್ಕಿಯಾಗಿದೆ. ಆದರೆ ರಾಜ್ಯಪಾಲರು ಅಷ್ಟೂ ಬಿಜೆಪಿ ಶಾಸಕರನ್ನು ರಾಜಭವನದ ಅಂಗಳದೊಳಕ್ಕೆ ಬಿಟ್ಟುಕೊಳ್ಳುತ್ತಾರಾ?
'ಮೂರ್ನಾಲ್ಕು ಸಚಿವರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡುವೆ. ಸಾಂವಿಧಾನಿಕವಾಗಿ ಆಡಳಿತ ನಡೆಸಲು ಅನುವು ಮಾಡಿಕೊಡಿ ಎಂದು ಕೇಳುವೆ. ಮುಂದಿನ ತಿಂಗಳು 2ರಿಂದ ಅಧಿವೇಶನ ನಡೆಯುವುದಕ್ಕೆ ಸಮ್ಮತಿಸಿ ಎಂದೂ ಬೇಡುವೆ' ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಈ ಮಧ್ಯೆ, ನಿನ್ನೆ ಇಡೀ ದಿನ ಬಿಸಿಲಲ್ಲಿ ರಸ್ತೆ ತಡೆ ನಡೆಸಿದ ಕಾಂಗ್ರೆಸ್ ಮಂದಿ ದಣಿವಾರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಸಹ 'ನಿಮಗಿದೇ ಸಾಕು' ಎಂದಿದೆಯಂತೆ. ಇನ್ನು, ದಳಪತಿಗಳು ದೊಡ್ಡೆಜಮಾನ್ರ 79ನೇ ಹುಟ್ಟುಹಬ್ಬ ಸಂಭ್ರಮದ ನೆಪ ಮಾಡಿಕೊಂಡು ರಾಜಕೀಯದಿಂದ ದೂರವಾಗಿದ್ದಾರೆ. ಆದರೆ ದೆಹಲಿ ಕಾಂಗ್ರೆಸ್ ಮಂದಿ ಸೊಪ್ಪು ಹಾಕದಿರುವುದೇ ಕುಮಾರಸ್ವಾಮಿ ಅಂಡ್ ಗ್ಯಾಂಗ್ ತಟಸ್ಥವಾಗಿರುವುದಕ್ಕೆ ಕಾರಣ ಎಂದು ಹೇಳಲಾಗಿದೆ. ಒಟ್ಟಿನಲ್ಲಿ, ಇಂದು ಸಂಜೆ ನಡೆಯುವ ಮತ್ತೊಂದು ಸುತ್ತಿನ ರಾಜಕೀಯ ಪ್ರಹಸನಕ್ಕೆ ಸಾಕ್ಷಿಯಾಗಲು ಕರ್ನಾಟಕ ಮಂದಿ ಅನಿವಾರ್ಯವಾಗಿ ಕಾಯುತ್ತಿದ್ದಾರೆ.