24x7 ರಾಜಕಾರಣಿ ಕನ್ನಡಿಗ ಎಚ್ ಡಿ ದೇವೇಗೌಡ 79
ಪ್ರತಿವರ್ಷದಂತೆ ಈ ಬಾರಿಯೂ ಕುಟುಂಬದವರ ಜೊತೆ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ನಿರ್ಧಾರವನ್ನು ದೇವೇಗೌಡರು ತಳೆದಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಕೆಲವು ಹಳೆಯ ಸ್ನೇಹಿತರೊಂದಿಗೆ ಶುಭಾಶಯ ವಿನಿಮಯ ಬಿಟ್ಟರೆ ಅದ್ಧೂರಿತನಕ್ಕೆ ಅವಕಾಶವಿಲ್ಲದ ಹುಟ್ಟುಹಬ್ಬ ಅವರದ್ದಾಗಿರುತ್ತದೆ.
ಬುಧವಾರ ಬೆಳಗ್ಗೆ ಮೇಲುಕೋಟೆಗೆ ತೆರಳಿ ಯೋಗ ನರಸಿಂಹಸ್ವಾಮಿ ಮತ್ತು ಚೆಲುವರಾಯಣಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಅಹೋಬಿಲ ಮಠದಲ್ಲಿ ಮಲೋಲ ಲಕ್ಷ್ಮೀ ನರಸಿಂಹಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಳಿಕ ನಾರಾಯಣ ಯತೀಂದ್ರ ಶ್ರೀಗಳ ಆಶೀರ್ವಾದ ಪಡೆದು ಬೆಂಗಳೂರಿಗೆ ವಾಪಸಾಗಲಿದ್ದಾರೆ. ಆನಂತರ ಬೆಂಗಳೂರಿನಿಂದ ನವದೆಹಲಿಗೆ ತೆರಳಿ ಅನುದಿನದ ರಾಜಕಾರಣದಲ್ಲಿ ಮತ್ತೆ ಅವರು ತೊಡಗಿಕೊಳ್ಳಲಿದ್ದಾರೆ.
ದೇವೇಗೌಡರು ಮೇ 18 , 1933 ರಲ್ಲಿ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಮೂಲತಃ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಪಡೆದಿರುವ ದೇವೇಗೌಡ, 1953 ರಿಂದ 1962 ರ ವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದು ಸ್ವತಂತ್ರವಾಗಿ ವಿಧಾನಸಭಾ ಚುನಾವಣೆಗೆ ನಿಂತು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಮುಂದಿನ ಮೂರು ಚುನಾವಣೆಯಲ್ಲಿ ಸತತವಾಗಿ ಹೊಳೆನರಸೀಪುರದಿಂದ ಗೆದ್ದು ಎರಡು ಅವಧಿಗೆ ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.
1991 ರಲ್ಲಿ ಮೊದಲ ಬಾರಿಗೆ ಹಾಸನ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾದರು. 1994ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೇಂದ್ರದಲ್ಲಿ 1996 ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತವಿರದೆ ತೃತೀಯ ರಂಗದ ನಾಯಕರಾಗಿ ಆಯ್ಕೆಯಾಗಿ ಎಲ್ಲರೂ ಹುಬ್ಬೇರಿಸುವಂತೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಿರಿಯ ರಾಜಕೀಯ ಮುತ್ಸದ್ದಿ, 24x7 ರಾಜಕಾರಿಣಿ ಎಚ್ ಡಿ ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು. ಲಾಂಗ್ ಲಿವ್ ದೇವೇಗೌಡ.