ಹಾಕಿ ಹಬ್ಬ: ಪಳಂಗಂಡ ತಂಡಕ್ಕೆ ಮಚ್ಚಮಾಡ ಕಪ್
ಸುಮಾರು 228 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಕಲಿಯಂಡ ಮತ್ತು ಪಳಂಗಂಡ ಆರಂಭದಿಂದಲೂ ಉತ್ತಮ ಆಟ ಪ್ರದರ್ಶಿಸುವ ಮೂಲಕ ಫೈನಲ್ ಗೆ ಪ್ರವೇಶಿಸಿದ್ದವು. ಪಳಂಗಂಡ ಹಾಗೂ ಕಲಿಯಂಡ ತಂಡಗಳ ನಡುವೆ ನಡೆದ ಫೈನಲ್ ಪಂದ್ಯಾವಳಿಗೆ ಶಾಸಕ ಅಪ್ಪಚ್ಚುರಂಜನ್ ಬೆಳ್ಳಿ ಸ್ಟಿಕ್ನಿಂದ ಬೆಳ್ಳಿ ಚೆಂಡನ್ನು ತಳ್ಳುವ ಮೂಲಕ ಚಾಲನೆ ನೀಡಿದರು. ಬಳಿಕ ಎರಡು ತಂಡಗಳು ಉತ್ತಮ ಆಟದ ಪ್ರದರ್ಶನ ನೀಡಿದವು.
ಎರಡು ತಂಡಗಳು ಪ್ರಬಲವಾಗಿದ್ದರಿಂದ ಪಂದ್ಯ ರೋಚಕವಾಗಿ ನಡೆಯಿತು. ಪ್ರಥಮಾರ್ಧ 22ನೇ ನಿಮಿಷದಲ್ಲಿ ಪಳಂಗಂಡ ತಂಡದ ಅಮರ್ ಅಯ್ಯಮ್ಮ ಅವರು ನೀಡಿದ ಚೆಂಡನ್ನು ಮುತ್ತಣ್ಣರವರು ಗೋಲಾಗಿ ಪರಿವರ್ತಿಸುವ ಮೂಲಕ ಕಲಿಯಂಡ ತಂಡದ ವಿರುದ್ಧ ಪ್ರಥಮ ಗೋಲು ದಾಖಲಿಸಿದರು. ಬಳಿಕ ಎರಡು ತಂಡಗಳ ನಡುವೆ ಭಾರೀ ಪೈಪೋಟಿ ನಡೆಯಿತ್ತಾದರೂ ಯಾವುದೇ ತಂಡ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.
ಪ್ರಥಮಾರ್ಧದ ಪಂದ್ಯದಲ್ಲಿ ಕಲಿಯಂಡ ತಂಡಕ್ಕೆ 10 ಫೆನಾಲ್ಟಿ ಕಾರ್ನರ್ ದೊರೆತರೂ ಅದನ್ನು ಗೋಲಾಗಿ ಪರಿವತರ್ಿಸಲು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧದಲ್ಲಿ ಎರಡು ತಂಡಗಳು ಉತ್ತಮ ಆಟದ ಪ್ರದರ್ಶನ ನೀಡಿದರು. ಕಲಿಯಂಡ ತಂಡದ ಆಟಗಾರರು ಪಳಂಗಂಡ ತಂಡದ ವಿರುದ್ಧ ಗೋಲು ದಾಖಲಿಸಲು ಪ್ರಯತ್ನಿಸಿದರಾದರೂ ಕ್ಷೇತ್ರ ರಕ್ಷಣೆ ಮೂಲಕ ಯಾವುದೇ ಗೋಲು ದಾಖಲಾಗದಂತೆ ಪಳಂಗಂಡ ತಂಡದ ಆಟಗಾರರು ಎಚ್ಚರವಹಿಸಿದ್ದರು. ಹೀಗಾಗಿ 1-0 ಅಂತರದಲ್ಲಿಯೇ ಆಟ ಮುಂದುವರೆಯಿತು.
ಈ ಸಂದರ್ಭ ಕಲಿಯಂಡ ತಂಡಕ್ಕೆ 4 ಫೆನಾಲ್ಟಿ ಕಾರ್ನರ್ ದೊರೆತರೂ ಅದನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗದ್ದರಿಂದ ಪಳಂಗಂಡ ತಂಡ ಜಯಸಾಧಿಸುವ ಮೂಲಕ ಮಚ್ಚಮಾಡ ಕಪ್ 2011ನ್ನು ತನ್ನ ಮುಡಿಗೇರಿಸಿಕೊಂಡಿತು. ಪಂದ್ಯಾವಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸುವುದಾಗಿ ಹೇಳಿದ್ದರಿಂದ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅವರು ಬಾರದೆ ಇದ್ದುದರಿಂದ ಹಲವರು ನಿರಾಶೆಗೊಂಡರು.
ಪಂದ್ಯಾವಳಿಯಲ್ಲಿ ವಿಧಾನಪರಿಷತ್ ಸದಸ್ಯ ಎಂ.ಸಿ.ನಾಣಯ್ಯ, ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕುಟ್ಟಪ್ಪ, ಮಚ್ಚಮಾಡ ಹಾಕಿ ಉತ್ಸವದ ಅಧ್ಯಕ್ಷ ಕಂದಾಭೀಮಯ್ಯ, ಕಾರ್ಯಧ್ಯಕ್ಷ ಡಾಲಿಚೆಂಗಪ್ಪ, ಟೆನ್ ಸ್ಪೋರ್ಟ್ಸ್ ನ ಉಪಾಧ್ಯಕ್ಷ ಚೇರಂಡಕಿಸನ್ ಮತ್ತಿತರರು ಉಪಸ್ಥಿತರಿದ್ದರು.