ಬಿಎಸ್ ವೈಗೆ ಜೈ ಎಂದ 'ಸುಪ್ರೀಂ' ಶಾಸಕರು; ಸರಕಾರ ಸುಭದ್ರ
ಈ ಮಧ್ಯೆ, ಎಲ್ಲ ಭಿನ್ನಮತೀಯ ಶಾಸಕರು ಯಡಿಯೂರಪ್ಪ ಅವರಿಗೆ ಬೇಷರತ್ ಬೆಂಬಲ ಘೋಷಿಸಿ ರಾಜ್ಯಪಾಲರಿಗೆ ಫ್ಯಾಕ್ಸ್ ಮೂಲಕ ಸಂದೇಶ ಕಳಿಸಿದ್ದಾರೆ. ಜತೆಗೆ 5 ಪಕ್ಷೇತರ ಶಾಸಕರೂ ಯಡಿಯೂರಪ್ಪ ನಾಯಕತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರಿಂದ 224 ಶಾಸಕರ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಸರಕಾರಕ್ಕೆ 127 ಶಾಸಕರ ಬೆಂಬಲವಿರುವುದು ಸ್ಪಷ್ಟವಾಗಿದೆ. ಸರಕಾರ ಸ್ಥಿರವಾಗಿ ಮುಂದುವರಿಯಲಿದೆ ಎಂದು ಪಕ್ಷದ ನಾಯಕ ಧನಂಜಯ್ ಕುಮಾರ್ ಅವರು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇದಕ್ಕೂಮುನ್ನ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ 10 ಮಂದಿಯೂ (ಒಬ್ಬರು ಬೆಂಗಳೂರಿನಲ್ಲಿಯೇ ಉಳಿದಿದ್ದಾರೆ) ನಾವೆಲ್ಲ ಒಗ್ಗಟ್ಟಾಗಿದ್ದು ಬೆಂಗಳೂರಿಗೆ ವಾಪಸಾದ ತಕ್ಷಣ ರಾಜ್ಯಪಾಲ ಭಾರದ್ವಾಜ್ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮ್ಮ ನಿರ್ಧಾರವನ್ನು ಮನದಟ್ಟುಪಡಿಸುವುದಾಗಿ ಹೇಳಿದ್ದಾರೆ.
ಈ ಮಧ್ಯೆ, ಗುಂಡು ಸಚಿವ ರೇಣುಕಾಚಾರ್ಯ ಅವರ ಸಂಧಾನ ಯಶಸ್ವಿಯಾಗಿದೆ ಎಂಬ ಮಾಹಿತಿ ಪಡೆದ ಯಡಿಯೂರಪ್ಪ ಅವರು 121 ಶಾಸಕರ ಬಲದೊಂದಿಗೆ ಉಳಿದೆರಡು ವರ್ಷವೂ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಬೆಂಗಳೂರಿನಲ್ಲಿ ಘೋಷಿಸಿದರು.
ಶಾಸಕ ಬೇಳೂರು ಗೋಪಾಲಕೃಷ್ಣ, ಬೆಳ್ಳುಬ್ಬಿ, ಅಸ್ನೋಟಿಕರ್ ಅವರೆಲ್ಲ ರಾಜ್ಯ ಹಿತದೃಷ್ಟಿಯಿಂದ ಯಾವುದೇ ಷರತ್ತು ಇಲ್ಲದೆ ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ನಮ್ಮ ಅಂಖಡ ಬೆಂಬಲ ಮುಂದುವರಿಸುವುದಗಾಗಿ ಘೋಷಿಸಿದ್ದಾರೆ.