ಡಿಸಿಯಾಗುವ ಕನಸಿದೆ, ಬಡತನವೇ ಶಾಪವಾಗಿ ಕಾಡುತ್ತಿದೆ
ಇದು 2010-2011ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಎಲ್ಲ ಜಿಲ್ಲೆಗಳಿಗಿಂತ ತಳಮಟ್ಟದಲ್ಲಿರುವ ಯಾದಗಿರಿ ಜಿಲ್ಲೆಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಯ ದುರಂತ ಕಥೆ. ಬಡತನದಲ್ಲಿ ಹುಟ್ಟಿದ್ದೇ ಈ ವಿದ್ಯಾರ್ಥಿಗೆ ಶಾಪವಾಗಿ ಪರಿಣಮಿಸಿದೆ. ಹಣದ ಸಹಾಯ ದೊರೆಯದಿದ್ದರೆ ಇಲ್ಲಿಯವರೆಗೆ ಪಟ್ಟ ಶ್ರಮವೆಲ್ಲ ನೀರಿನಲ್ಲಿ ಮಾಡಿದ ಹೋಮವಾಗುವಂಥ ಪರಿಸ್ಥಿತಿ ಎದುರಾಗಿದೆ.
ಈತ ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕಿನ ಉಕಿನಾಳ ತಾಂಡಾದ ಯುವಕ ತಿಪ್ಪಣ್ಣಾ ನಿಲಕಂಠ ನಾಯಕ್. ಇವನು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 600ಕ್ಕೆ 542 ಅಂಕಗಳನ್ನು ಪಡೆದು, ಪ್ರತಿಶತ 90.33ರಷ್ಟು ಮಾಡಿ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದೆ. ಲಕ್ಷ್ಮೀಬಾಯಿ- ನೀಲಕಂಠ ದಂಪತಿಗೆ ಒಟ್ಟು 4 ಜನ ಗಂಡು ಮಕ್ಕಳು. ಅದರಲ್ಲಿ ತಿಪ್ಪಣ್ಣಾ ಎರಡನೆಯವನು. ಈತನ ಅಣ್ಣ ಡಿಎಡ್ ಓದುತ್ತಿದ್ದು, ಇನ್ನೊಬ್ಬ 9ನೇ ತರಗತಿ, ಇನ್ನೊಬ್ಬ 7ನೇ ತರಗತಿ ಓದುತ್ತಿದ್ದಾನೆ. 9ನೇ ತರಗತಿ ಓದುತ್ತಿರುವ ಮಗನನ್ನು ಬಡತನದ ಕಾರಣದಿಂದ ಈಗಾಗಲೆ ಶಾಲೆ ಬಿಡಿಸಲಾಗಿದೆ. ಈಗ ತಿಪ್ಪಣನನ್ನು ಮುಂದೆ ಓದಿಸಲಾಗುವುದಿಲ್ಲ ಎನ್ನುತ್ತಾರೆ ಇವನ ತಂದೆ-ತಾಯಿ.
ತಿಪ್ಪಣ್ಣಾ ಶಹಪೂರದ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾನೆ. ಮನೆಯಲ್ಲಿ ವಿದ್ಯುತ್ ಇಲ್ಲದಿದ್ದರೂ ಬುಡ್ಡಿದೀಪ ಉರಿಸಿ ಓದಿದ್ದಾನೆ. ಅಲ್ಲದೇ ಎತ್ತುಗಳ ಸಗಣಿ ಹಾಗೂ ಮೈ ತೊಳೆದು ಕೂಲಿ-ನಾಲಿ ಮಾಡಿ ಬಿಡುವಿನ ಸಮಯದಲ್ಲಿ ಓದಿ ಮುಂದೆ ಬಂದಿದ್ದಾನೆ. ಮುಂದೆ ಉನ್ನತ ವ್ಯಾಸಂಗ ಮಾಡಿ, ಜಿಲ್ಲಾಧಿಕಾರಿಯಾಗುವ ಆಸೆ ಇದೆ. ಯಾರಾದರೂ ದಯಾಳುಗಳು ಮುಂದೆ ಬಂದು ಆರ್ಥಿಕ ಸಹಾಯ ಮಾಡಿದರೆ ಓದುತ್ತೇನೆ ಎನ್ನುತ್ತಾನೆ ತಿಪ್ಪಣ್ಣ.
ಯಾದಗಿರಿ ಜಿಲ್ಲೆ ಮೊನ್ನೆ ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆದಿದೆ. ಆದರೆ ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಯಾವುದೇ ಕೊರತೆಯಿಲ್ಲ. ಕಡುಬಡತನದಲ್ಲೂ ತನ್ನಲ್ಲಿರುವ ಸೂಕ್ತ ಪ್ರತಿಭೆಯನ್ನು ಉಪಯೋಗಿಸಿ, ಜಿಲ್ಲೆಯಲ್ಲಿ ಹೆಸರು ಮಾಡಿರುವ ಈ ಯುವಕನಿಗೆ ದಾನಿಗಳು ಹಾಗೂ ಸಂಘ ಸಂಸ್ಥೆಯವರು ಸಹಾಯ ಮಾಡಿದರೆ, ಪ್ರತಿಭೆಯೊಂದು ಬಾಡಿ ಹೋಗುವುದನ್ನು ತಡೆದಂತಾಗುತ್ತದೆ. ಈ ಯುವಕನ ಕನಸು ಆದಷ್ಟೂ ಬೇಗ ನನಸಾಗಲಿ ಎನ್ನುವುದು ನಮ್ಮ ಆಶಯ.
ಸಹಾಯ ಮಾಡಬೇಕೆಂಬ ಹಂಬಲವುಳ್ಳವರು ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ : 97403 03301.