ಯಡಿಯೂರಪ್ಪ ನಗಬೇಕೋ ಅಳಬೇಕೋ ನೀವೇ ಹೇಳಿ?
ವಿಧಾನಸಭೆ ಸ್ಪೀಕರ್ ಕೆಜಿ ಬೋಪಯ್ಯ ಮತ್ತು ಯಡಿಯೂರಪ್ಪಗೆ ಮುಖಭಂಗವಾಗಿದೆ. ಯಡಿಯೂರಪ್ಪನವರ ನಾಯಕತ್ವದ ವಿರುದ್ಧ ಸಿಡಿದೆದ್ದಿದ್ದ 11 ಬಿಜೆಪಿ ಶಾಸಕರು ಮತ್ತು ಐವರು ಪಕ್ಷೇತರ ಶಾಸಕರ ಅತಂತ್ರ ಸ್ಥಿತಿ ನಿವಾರಣೆಯಾಗಿದೆ. ಆದರೆ ಮುಂದೇನು? ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗಿದೆ. 'ಅರ್ಹ' ಶಾಸಕರು ನಾಯಕತ್ವ ಬದಲಿಗೆ ಪಟ್ಟು ಹಿಡಿಯುವರಾ? ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ ಮುಂದಾಗುವುದಾ? ವಿರೋಧ ಪಕ್ಷಗಳು ವಿಶ್ವಾಸಮತ ಯಾಚನೆ ಕೋರುವರಾ? ಅಥವಾ ಮತ್ತೊಂದು ಮಧ್ಯಂತರ ಚುನಾವಣೆಯಾ?
ಮೇ 16ರಿಂದ ಹತ್ತು ದಿನಗಳ ಕಾಲ ಪ್ರಾರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ಈ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರೆಯಲಿದೆ. ಯಡಿಯೂರಪ್ಪ ಮಾತ್ರ ಈ ತೀರ್ಪಿನಿಂದ ತಮ್ಮ ಕುರ್ಚಿಗೇನೂ ಧಕ್ಕೆಯಿಲ್ಲ, ಬಿಜೆಪಿ ಬಲ ಮತ್ತಷ್ಟು ಗಟ್ಟಿಯಾದಂತಾಗಿದೆ, ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ. 11 ಜನ ಅರ್ಹಗೊಂಡಿರುವ ಶಾಸಕರಿಂದಾಗಿ ಬಿಜೆಪಿಯ ಬಲ 119ಕ್ಕೆ ಹಿಗ್ಗಿದೆ ಎಂದು ನಗುವಿಲ್ಲದೆ ಬೀಗುತ್ತಿದ್ದಾರೆ. (105 + 3 ಉಪಚುನಾವಣೆಯಲ್ಲಿ ಗೆದ್ದವರು + 11 ಅರ್ಹಗೊಂಡ ಶಾಸಕರು = 119).
ನಾಯಕತ್ವದ ಬದಲಾವಣೆಯ ಏಕೈಕ ಬೇಡಿಕೆ ಇಟ್ಟಿದ್ದ ಭಿನ್ನಮತೀಯರು, ಸುಪ್ರೀಂ ಕೋರ್ಟ್ ತೀರ್ಪು ನಮ್ಮ ಹೋರಾಟಕ್ಕೆ ಸಂದ ಜಯ. ನಾವು ಈಗಲೂ ಬಿಜೆಪಿಯೊಂದಿಗೇ ಇದ್ದೇವೆ. ಬಿಜೆಪಿಯನ್ನು ಯಾವತ್ತೂ ತೊರೆದಿಲ್ಲ. ಮುಂದಿನ ನಡೆಯೇನು ಎಂಬುದನ್ನು ಎಲ್ಲರೂ ಒಗ್ಗಟ್ಟಾಗಿ ಕುಳಿತು, ಚರ್ಚಿಸಿ ನಂತರ ತಿಳಿಸುತ್ತೇವೆ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ. ಕೆಲ ಮೂಲಗಳ ಪ್ರಕಾರ, ಮತ್ತೆ ರೆಸಾರ್ಟ್ ರಾಜಕಾರಣ ಶುರುಮಾಡಲು ಗೋವಾ ಅಥವಾ ಮುಂಬೈಗೆ ತೆರಳಲಿದ್ದಾರೆ.
ಭಿನ್ನಮತದ ಹೊಗೆಯೆಬ್ಬಿಸಿ ಬಿಜೆಪಿ ತೊರೆದ ಶಾಸಕರು ಸ್ಮಶಾನಕ್ಕೆ ಹೋದ ಹೆಣದಂತೆ ಎಂದು ಸಿಟಿ ರವಿ ಹೇಳಿದ್ದರು. ಇದಕ್ಕೆ ಪ್ರತಿಯಾಗಿ, ನಾವು ಕೂಡ ಅಂಥವರನ್ನು ಸ್ಮಶಾನಕ್ಕೆ ಕಳಿಸಲು ಸಿದ್ಧರಾಗಿದ್ದೇವೆ ಎಂದು ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ನವದೆಹಲಿಯಲ್ಲಿ ಹೇಳಿದ್ದಾರೆ. ಇದೀಗ ತಾನೆ ಶಿವಮೊಗ್ಗದವರೆಗೆ ನಡೆಸಿದ ಪಾದಯಾತ್ರೆಗೆ ಚಾಲನೆ ನೀಡಿ ಸುಸ್ತಾಗಿದ್ದ ದೇವೇಗೌಡ ಮತ್ತೆ ಬಿಜೆಪಿ ವಿರುದ್ಧ ಕೊಡವಿ ನಿಂತಿದ್ದಾರೆ. ಇದೇ ಭಾನುವಾರ ಮೇ 15ರಂದು ನಡೆಯಲಿರುವ ಬೃಂದಾವನ ವಸಂತೋತ್ಸವಕ್ಕೆಂದು ಅಮೆರಿಕಕ್ಕೆ ತೆರಳಲಿರುವ ಎಚ್ ಡಿ ಕುಮಾರಸ್ವಾಮಿಯಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.