ರಾಜ್ಯ ಬಿಜೆಪಿ ಪಟ್ಟದರಸಿ ಶೋಭಾ ಕರಂದ್ಲಾಜೆ ?
ತಮ್ಮ ವಿರುದ್ದದ ಭಿನ್ನಮತ ಎಂಬ ಅಗ್ನಿಕುಂಡಲದಲ್ಲಿಯೇ ಚುನಾವಣೆ ನಡೆದರೂ ಗೆಲುವನ್ನು ತಮ್ಮದಾಗಿಸಿಕೊಂಡಿರುವುದರಿಂದ ಯಡಿಯೂರಪ್ಪಗೆ ಈಗ ಆನೆಬಲ ಬಂದಂತಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ.
ರಾಜ್ಯ ಬಿಜೆಪಿಯಲ್ಲಿ ಭಿನ್ನಮತಕ್ಕೆ ನೀರೆರೆದಿದ್ದ ಈಶ್ವರಪ್ಪ ಅವರರಿಗೆ ತಕ್ಕ ಶಾಸ್ತಿ ಮಾಡುವುದರ ಜತೆ ಜತೆಗೆ ತಮ್ಮ ಅತ್ಯಾಪ್ತ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮಣೆ ಹಾಕುವ ಇರಾದೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಶೋಭಾ ಅವರ ಕೈಗೆ ಪಕ್ಷದ ಚುಕ್ಕಾಣಿ ಒಪ್ಪಿಸಲು ಅವರು ಸಿದ್ಧತೆ ನಡೆಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ.
ಆದರೆ ಸ್ವಕ್ಷೇತ್ರದವರೇ ಆದ ಈಶ್ವರಪ್ಪ ಅವರನ್ನು ಎದುರು ಹಾಕಿಕೊಳ್ಳದೇ ಜಾಣತನದಿಂದ ಅವರನ್ನು ನಿಭಾಯಿಸಲು ಆಲೋಚಿಸಿರುವ ಯಡಿಯೂರಪ್ಪ, ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ, ತೃಪ್ತಿ ಪಡಿಸುವ ವಿಶ್ವಾಸ ಹೊಂದಿದ್ದಾರೆ. ಹೀಗಾಗಿಯೇ ಈಶ್ವರಪ್ಪ ದಿಢೀರನೇ ಭಿನ್ನಮತದಿಂದ ದೂರಸರಿದಿದ್ದು ಎಂಬುದು ಗಮನಾರ್ಹ.
ಇದೇ ವೇಳೆ ಯಡಿಯೂರಪ್ಪ ಅವರು ಶೀಘ್ರವೇ ಸಂಪುಟ ವಿಸ್ತರಣೆಯನ್ನು ಪೂರ್ಣಗೊಳಿಸುವುದು ನಿಶ್ಚಿತ ಎನ್ನಲಾಗಿದೆ. 7 ಸ್ಥಾನಗಳು ಖಾಲಿಯಿದ್ದು, ರವೀಂದ್ರನಾಥ್ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ರಾಜೀನಾಮೆ ಪಡೆದು ಒಟ್ಟು 11 ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸುವ ಲೆಕ್ಕಾಚಾರವೂ ಇದೆ. ಇನ್ನು ಅನರ್ಹ ಶಾಸಕರೂ ಈಗಾಗಲೇ ಯಡಿಯೂರಪ್ಪ ಅವರತ್ತ ವಾಲಿದ್ದು, ಅವರಲ್ಲಿ ಕೆಲವರಿಗೆ ಸಚಿವ ಸ್ಥಾನ ದಯಪಾಲಿಸಿ, ಅವರನ್ನೂ ಬುಟ್ಟಿಗೆ ಹಾಕಿಕೊಳ್ಳುವ ಇರಾದೆ ಹೊಂದಿದ್ದಾರೆ.
ಇತ್ತ ತಮ್ಮ ಆಡಳಿತಾವಧಿಗೆ ಮೂರು ವರ್ಷ ತುಂಬಲಿದೆ. ಇದೇ ವೇಳೆ ಅತ್ತ ಪ್ರತಿಪಕ್ಷಗಳು ತಮ್ಮ ವಿರುದ್ಧ ಭಾರಿ ಜನಾಂದೋಲನಕ್ಕೆ ಅಣಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಮುಂದಿನ ಚುನಾವಣೆ ದೃಷ್ಟಿಯಿಂದ ತಮ್ಮ ವರ್ಚಸ್ಸನ್ನು ವೃದ್ಧಿಸಿಕೊಂಡು ಪಕ್ಷವನ್ನು ಬಲಪಡಿಸಲು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇಂತಹ ಜವಾಬ್ದಾರಿಯನ್ನು ಹೊರುವ ಸಾಮರ್ಥ್ಯ ಮತ್ತು ವಿಶ್ವಾಸವನ್ನು ಒಬ್ಬೇ ಒಬ್ಬ ಶೋಭಾಗೆ ಮಾತ್ರ ಇದೆ ಎಂಬುದು ಯಡಿಯೂರಪ್ಪ ಅವರ ಬಲವಾದ ನಂಬಿಕೆ.