ಮೇ 13 ಯಡಿಯೂರಪ್ಪನವರಿಗೆ ಲಕ್ಕಿ ಆಗುವುದೆ?
ಇಂದು ಬೆಳಿಗ್ಗೆಯಿಂದ ಶುರುವಾಗಿರುವ ಮತಎಣಿಕೆಯಲ್ಲಿ ಕೆಲ ಸುತ್ತಿನ ಮತ ಎಣಿಕೆಗಳ ನಂತರ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವುದು ಯಡಿಯೂರಪ್ಪನವರಲ್ಲಿ ಮಾಯವಾಗಿದ್ದ ಕಿರುನಗೆಯನ್ನು ಅಲ್ಪಪ್ರಮಾಣದಲ್ಲಿಯಾದರೂ ಮರುಕಳಿಸಿದೆ. ಮೂರೂ ಕ್ಷೇತ್ರಗಳಲ್ಲಿ ಗೆಲ್ಲಬೇಕಾಗಿರುವುದು ಯಡಿಯೂರಪ್ಪನವರು ತಮ್ಮ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ತುಂಬಾ ಅವಶ್ಯಕವಾಗಿದೆ.
[ಉಪಚುನಾವಣೆ ಜಯ ಲಕ್ಕಿ] [ಸುಪ್ರೀಂ ಕೋರ್ಟ್ ತೀರ್ಪು ಅನ್ ಲಕ್ಕಿ]
ನಾಲ್ಕನೇ ಸುತ್ತಿನ ಮತಎಣಿಕೆಯ ನಂತರ ಚನ್ನಪಟ್ಟಣದಲ್ಲಿ ಸಿಪಿ ಯೋಗೀಶ್ವರ್, ಬಂಗಾರಪೇಟೆಯಲ್ಲಿ ಎಂ ನಾರಾಯಣ ಸ್ವಾಮಿ ಮತ್ತು ಜಗಳೂರಿನಲ್ಲಿ ಎಸ್ ವಿ ರಾಮಚಂದ್ರ ತಮ್ಮ ಸಮೀಪದ ಹುರಿಯಾಳುಗಳಿಗಿಂತ ತುಸು ಮುನ್ನಡೆ ಸಾಧಿಸಿದ್ದಾರೆ. ರಾಮಚಂದ್ರ ಅವರು 3218 ಮತಗಳಿಂದ ಮುಂದೆ ಇದ್ದಾರೆ, ಯೋಗೀಶ್ವರ್ 4000 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ನಾರಾಯಣ ಸ್ವಾಮಿ 2331 ಮತಗಳಿಂದ ಮುಂದೆ ಇದ್ದಾರೆ.
ಯಡಿಯೂರಪ್ಪನವರನ್ನು ಕೆಳಗಿಳಿಸಲು ಪಣತೊಟ್ಟಿರುವ ಜೆಡಿಎಸ್ ಇತ್ತೀಚೆಗೆ ಬೆಂಗಳೂರಿನಿಂದ ಯಡಿಯೂರಪ್ಪನವರ ತವರು ಜಿಲ್ಲೆಯಾದ ಶಿವಮೊಗ್ಗದವರೆಗೂ ಪಾದಯಾತ್ರೆ ನಡೆಸಿ, ಭ್ರಷ್ಟಾಚಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನ ನಡೆಸಿರುವುದಾಗಿ ಹೇಳಿದೆ. ಕಾಂಗ್ರೆಸ್ ಕೂಡ ರಾಜ್ಯಪಾಲರಿಗೆ ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದೆ.
ಬಿಜೆಪಿ ಹೈಕಮಾಂಡ್ ಕೂಡ ಉಪಚುನಾವಣೆ ಮುಗಿಯುವವರೆಗೆ ಯಡಿಯೂರಪ್ಪ ತಮ್ಮ ಕುರ್ಚಿಯಲ್ಲಿ ಕುಳಿತಿರಲಿ ಎಂದು ಭಿನ್ನಮತೀಯರಾದ ಈಶ್ವರಪ್ಪ, ಅನಂತಕುಮಾರ್, ಸಿಟಿ ರವಿ ಮುಂತಾದವರಿಗೆ ಸಮಾಧಾನ ಹೇಳಿ ಕಳಿಸಿತ್ತು. ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ ಯಡಿಯೂರಪ್ಪ ಸ್ವಲ್ಪ ಕಾಲವಾದರೂ ನಿರಾಳವಾಗಿ ಉಸಿರಾಡಿಸಬಹುದು.