16 ಶಾಸಕರು ಅನರ್ಹರಲ್ಲ: ಬೋಪಯ್ಯ ಆದೇಶಕ್ಕೆ ಸೋಲು
ಇದರೊಂದಿಗೆ ಹದಿನಾರೂ ಶಾಸಕರು ತಮ್ಮ ಶಾಸಕತ್ವವನ್ನು ಉಳಿಸಿಕೊಂಡಂತಾಗಿದೆ. ಇವರೆಲ್ಲ ಜೆಡಿಎಸ್ ನಾಯಕರಾದ ಎಚ್ ಡಿ ದೇವೇಗೌಡ ಮತ್ತು ಎಚ್ ಡಿ ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಮತ್ತು ನ್ಯಾ. ಸಿರಿಯಾಕ್ ಜೋಸೆಫ್ ಅವರ ನ್ಯಾಯಪೀಠ ಶುಕ್ರವಾರ ಈ ತೀರ್ಪು ನೀಡಿದೆ. ಸ್ಪೀಕರ್ ಬೋಪಯ್ಯ ಕ್ರಮಕ್ಕೆ ಪೀಠ ತೀವ್ರವಾಗಿ ಕಿಡಿಕಾರಿದೆ. ಬೋಪಯ್ಯ ಅವರ ಸ್ಥಾನಕ್ಕೆ ಮುಳುಗುನೀರು ತಂದಿದೆ.
ಇದರಿಂದ ಮುಖ್ಯಮಂತ್ರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರಕಾರದ ಭವಿಷ್ಯ ಡೋಲಾಯಮಾನವಾಗಿದೆ. ಬೆಳಗ್ಗೆಯಷ್ಟೇ ಚುನಾವಣೆ ಗೆಲುವಿನ ಅಲೆಯಲ್ಲಿ ಬೀಗುತ್ತಿದ್ದ ಯಡಿಯೂರಪ್ಪ ಈಗ ಬಿರುಗಾಳಿಗೆ ಸಿಕ್ಕಿಕೊಂಡಿದ್ದಾರೆ. ಬಿಜೆಪಿ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ. ರಾಜ್ಯ ರಾಜಕಾರಣದಲ್ಲಿ ಕೋಲಾಹಲ ವಾತಾವರಣ ಮೂಡಿದೆ.
11 ಬಿಜೆಪಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಆನಂದ್ ಆಸ್ನೋಟಿಕರ್, ಬಾಲಚಂದ್ರ ಜಾರಕಿಹೊಳಿ, ಬಿ.ಎನ್. ಸಾರ್ವಭೌಮ, ಬ್ರಹ್ಮಗೌಡ ಎಚ್. ಕಾಗೆ, ವೈ. ಸಂಪಂಗಿ, ಜಿ.ಎನ್. ನಂಜುಂಡಸ್ವಾಮಿ, ಎಂ.ವಿ. ನಾಗರಾಜು, ಶಿವಣ್ಣಗೌಡ ನಾಯಕ್, ಎಚ್.ಎಸ್. ಶಂಕರಲಿಂಗೇಗೌಡ ಮತ್ತು ಬೆಳ್ಳುಬ್ಬಿ ಸಂಗಪ್ಪ ಕಾಳಪ್ಪಗೆ ಜಯ ಸಿಕ್ಕಿದೆ. ಹಾಗೆಯೇ, 5 ಪಕ್ಷೇತರ ಶಾಸಕರಾದ ಪಿ.ಎಂ. ನರೇಂದ್ರ ಸ್ವಾಮಿ, ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ, ಡಿ. ಸುಧಾಕರ್ ಹಾಗೂ ಶಿವರಾಜ ತಂಗಡಗಿ ಅವರೂ ಗೆಲುವಿನ ನಗೆ ಬೀರಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರಕಾರದ ವಿರುದ್ಧ 11 ಮಂದಿ ಬಿಜೆಪಿ ಶಾಸಕರು ಮತ್ತು 5 ಪಕ್ಷೇತರರು 2010ರ ಅಕ್ಟೋಬರ್ ನಲ್ಲಿ ಬಂಡೆದ್ದಿದ್ದರು. ಜತೆಗೆ ರಾಜ್ಯಪಾಲರಿಗೆ ಪತ್ರ ಬರೆದು ತಾವು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಬೆಂಬಲ ವಾಪಸ್ ಪಡೆದಿರುವುದಾಗಿ ತಿಳಿಸಿದ್ದರು.