ಪಿಯುಸಿ ರ್ಯಾಂಕ್ ವಿಜೇತೆಗೆ ಮದುವೆ ಸಿದ್ಧತೆ
ಶಿಲ್ಪಾ ಹೇಳುವಂತೆ ಅವಳ ಅಪ್ಪ-ಅಮ್ಮ ಮೊನ್ನೆಮೊನ್ನೆಯವರೆಗೂ ಜೀತದಾಳುಗಳಾಗಿದ್ದವರು ಈಗ ಕೂಲಿ ಕೆಲಸಕ್ಕೆ ಹೋಗಿ ತನ್ನನ್ನೂ, ತಮ್ಮನನ್ನೂ ಸಾಕುತ್ತಿದ್ದಾರೆ. ರ್ಯಾಂಕ್ ಗಳಿಸಿದ ಸುದ್ದಿಯ ಸಂತಸ ಕೂಡ ಮನೆಯಲ್ಲಿಲ್ಲ. ಅವಳ ಮದುವೆಗೆ ಸಿದ್ಧತೆ ನಡೆದಿದೆ. ಈಗಾಗಲೇ ಎರಡು ಮೂರು ಸಂಬಂಧ ನೋಡಿದ್ದು, ಮುಂದಿನ ಓದಿಗೆ ಯಾರೂ ಸಹಾಯ ಮಾಡದಿದ್ದರೆ ಮದುವೆ ಗ್ಯಾರಂಟಿ.
ಅಂದಹಾಗೆ ಎಸ್ಎಸ್ಎಲ್ ಸಿಯಲ್ಲಿ ಶೇ. 86ರಷ್ಟು ಗಳಿಸಿದ್ದ ಶಿಲ್ಪಾಗೆ ಸೈನ್ಸ್ ಓದಬೇಕೆಂಬ ಹಂಬಲ ಬಹಳಷ್ಟಿತ್ತು. ಆದರೆ ಮನೆಯಲ್ಲಿ ಊಟಕ್ಕೂ ಕಷ್ಟ. ಬೆಳಗ್ಗೆ ತಿಂಡಿ ತಿನ್ನದೆ ಕಾಲೇಜಿಗೆ ಹೋಗುತ್ತಿದ್ದ ಶಿಲ್ಪಾ, ಮಧ್ಯಾಹ್ನ ವಾಪಸ್ ಬಂದು ಊಟ ಮಾಡುತ್ತಿದ್ದಳು. ಊರಿಂದ 6 ಕಿ.ಮೀ. ದೂರವಿರುವ ಕಾಲೇಜಿಗೆ ಬಸ್ಸಿನಲ್ಲಿ ತೆರಳುತ್ತಿದ್ದಳು.
ಆದರೆ ಈಗ ಪದವಿ ಕಾಲೇಜಿಗಾಗಿ ತುಮಕೂರಿಗೆ ಹೋಗಬೇಕು. ಪ್ರತಿದಿನ ಬಸ್ ಪ್ರಯಾಣ ದರವೇ 30 ರುಪಾಯಿ ಆಗುತ್ತದೆ. ಜತೆಗೆ ಓದಿನ ಖರ್ಚೂ ಭರಿಸಬೇಕು. ಆರ್ಥಿಕ ನೆರವು ಸಿಕ್ಕಲ್ಲಿ ಮಾತ್ರ ಅಪ್ಪ-ಅಮ್ಮ ಅವಳನ್ನು ಕಾಲೇಜಿಗೆ ಕಳಿಸುವ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಶಿಲ್ಪಕಲಾಳ ಆಸೆ, ಆಕಾಂಕ್ಷೆಗೆ ನೀರೆರೆಯುವವರು ಯಾರು?