ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲು ಅಶೋಕ್ ಸೂಚನೆ
ಒಸಾಮಾ ಬಿನ್ ಲಾಡೆನ್ ನ ಹತ್ಯೆಯಾಗಿರುವ ಹಿನ್ನೆಲೆಯಲ್ಲಿ ಕನಿಷ್ಠ ಒಂದು ವರ್ಷದ ಕಾಲ ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ ಮತ್ತು ಕರಾವಳಿಗುಂಟ ಎಲ್ಲಾ ರಾಜ್ಯಗಳೂ ಬಿಗಿ ಭದ್ರತೆಯನ್ನು ಒದಗಿಸಬೇಕೆಂದು ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೆ ಆದೇಶ ನೀಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ನಗರದಲ್ಲಿ ತಿಳಿಸಿದರು. ಎಂಥದೇ ಪರಿಸ್ಥಿತಿ ಬಂದರೂ ಕರ್ನಾಟಕ ಎದುರಿಸಲು ಸನ್ನದ್ಧವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಹುರಾಷ್ಟ್ರೀಯ ಕಂಪನಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿರುತ್ತಾರೆ. ಕರಾವಳಿ ಪ್ರದೇಶದಲ್ಲಿ ಹೊಟೇಲು, ಲಾಡ್ಜ್, ರೆಸಾರ್ಟ್, ಹೋಂಸ್ಟೇಗಳಿಗೆ ಬರುವ ಜನರ ಮೇಲೆ ಹೆಚ್ಚಿನ ನಿಗಾ ಇಡಬೇಕೆಂದು ಆದೇಶಿಸಿದ್ದಾರೆ. ಇದಕ್ಕಾಗಿಯೇ ಪ್ರತಿ 30 ಕಿ.ಮೀ. ದೂರದಲ್ಲಿ ವಿಶೇಷವಾದ ಪೊಲೀಸ್ ಠಾಣೆಯನ್ನು ಇಡಲು ನಿರ್ಧರಿಸಲಾಗಿದ್ದು, 6 ಠಾಣೆಗಳು ಕೂಡಲೆ ಸ್ಥಾಪಿಸಲಾಗುತ್ತಿದೆ ಎಂದು ಅಶೋಕ್ ವಿವರಿಸಿದರು.
ವ್ಯತಿರಿಕ್ತ ಪರಿಸ್ಥಿತಿ ಎದುರಿಸಲೆಂದು 300 ಸದಸ್ಯರಿರುವ ಬಲಿಷ್ಠ ಕಮಾಂಡೋ ಪಡೆಯನ್ನು ಸಿದ್ಧಗೊಳಿಸಲಾಗಿದೆ. ಸಿ ಆರ್ ಪಿ ಎಫ್ ಟ್ರೇನಿಂಗ್ ಗೆಂದು ಬೆಳಗಾವಿಯಲ್ಲಿ ತರಬೇತಿ ಕೇಂದ್ರ ಸ್ಥಾಪಿಸಲೆಂದು 400 ಎಕರೆ ಜಮೀನನ್ನು ನೀಡಲು ಕೂಡ ಸರಕಾರ ನಿರ್ಧರಿಸಿದೆ. ಇದಕ್ಕಾಗಿ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು.