'ಆಪರೇಷನ್ ಕಮಲದ' ರಿಸಲ್ಟ್ ಶುಕ್ರವಾರ
ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್- ಜೆಡಿಎಸ್ ನಡುವೆ ಭ್ರಷ್ಟಾಚಾರ ಮತ್ತು ಅಕ್ರಮ ಗಣಿಗಾರಿಕೆ ಬಗ್ಗೆ ಇತ್ತೀಚೆಗೆ ಹೋರಾಟ ತೀವ್ರವಾಗಿರುವ ಹೊತ್ತಿನಲ್ಲಿ ಈ ಫಲಿತಾಂಶ ಒಂದಷ್ಟು ಕುತೂಹಲ ಕೆರಳಿಸಿದೆ.
ಗಮನಾರ್ಹವೆಂದರೆ ಈ ಫಲಿತಾಂಶದಿಂದ ಸರ್ಕಾರದ ಸುಭದ್ರತೆಯ ಮೇಲೇನೂ ಪರಿಣಾಮ ಬೀರುವುದಿಲ್ಲ. ಆದರೆ ತ್ರಿಕೋನ ಸ್ಪರ್ಧೆ ಕಂಡಿದ್ದ ಉಪಚುನಾಚಣೆಯ ಫಲಿತಾಂಶವು ಮೂರೂ ಪಕ್ಷಗಳ ನಡುವಣ ರಾಜಕೀಯ ಜಿದ್ದಾಜಿದ್ದಿಗೆ ಒಂದಷ್ಟು ಆಹಾರ ಒದಗಿಸಲಿದೆ. ಒಂದು ವೇಳೆ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೇಲುಗೈ ಆದರೆ ಬಿಜೆಪಿ ಸರಕಾರದ ವಿರುದ್ಧದ ಹೋರಾಟ ಬಲಗೊಳ್ಳುವುದು ಗ್ಯಾರಂಟಿ.
ಜೆಡಿಎಸ್ ಭದ್ರಕೋಟೆ ಚನ್ನಪಟ್ಟಣ ಕುತೂಹಲದ ಕೇಂದ್ರ ಬಿಂದುವಾಗಿದೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜೆಡಿಎಸ್ ಗೆ ತೀವ್ರ ಸ್ಪರ್ಧೆಯೊಡ್ಡಿವೆ. ಕಾಂಗ್ರೆಸ್ ಅಥವಾ ಬಿಜೆಪಿ ಜಯ ಗಳಿಸಿದರೆ ಜೆಡಿ ಎಸ್ ಗೆ ಅದರಲ್ಲೂ ಎಚ್.ಡಿ. ಕುಮಾರಸ್ವಾಮಿಗೆ ತೀವ್ರ ರಾಜಕೀಯ ಹಿನ್ನಡೆ ಅನುಭವಿಸಿದಂತಾಗುತ್ತದೆ. ಈ ಹಿಂದೆ, ಜಗಳೂರು ಮತ್ತು ಬಂಗಾರಪೇಟೆ ಕಾಂಗ್ರೆಸ್ ಹಿಡಿತದಲ್ಲಿತ್ತು.
ಪ್ರಚಲಿತ ಬಿಜೆಪಿಯ ಆಂತರಿಕ ಪರಿಸ್ಥಿತಿ ಗಮನಿಸಿದರೆ ಮೂರು ಕ್ಷೇತ್ರಗಳ ಪೈಕಿ ಕನಿಷ್ಠ ಎರಡನ್ನು ಗೆಲ್ಲಲು ಸಾಧ್ಯವಾದರೆ ಮಾತ್ರ ಮುಖ್ಯಮಂತ್ರಿ ಯಡಿಯೂರಪ್ಪಗೆ ಬಲಿಷ್ಠರಾಗುತ್ತಾರೆ. ಪಕ್ಷದೊಳಗೆ ತಮ್ಮ ವಿರುದ್ಧ ಕೇಳಿಬರುತ್ತಿರುವ ಭಿನ್ನಮತಕ್ಕೆ ಉತ್ತರ ನೀಡಿದಂತಾಗಬಹುದು. ಆದರೆ ಚುನಾವಣೆಗೆ ಕೆಲವೇ ದಿನಗಳಿರುವಾಗ ಯಡಿಯೂರಪ್ಪ ನಾಯಕತ್ವದ ವಿರುದ್ಧ ಪಕ್ಷದಲ್ಲಿ ಬಂಡಾಯ ಬಾವುಟ ಉತ್ತುಂಗಕ್ಕೇರಿತ್ತು. ಹೀಗಾಗಿ ಬಿಜೆಪಿಗೆ ಸೋಲು ಅನಿವಾರ್ಯವಾದರೆ ಯಡಿಯೂರಪ್ಪ ಅವರು ಸೋಲಿನ ಹೊಣೆಯನ್ನು ಭಿನ್ನಮತ ಚಟುವಟಿಕೆಗಳ ಮೇಲೆ ಹೊರೆಸುವ ಸಂಭವವನ್ನು ಅಲ್ಲಗಳೆಯುವಂತಿಲ್ಲ.
ಐದು ರಾಜ್ಯಗಳ ಫಲಿತಾಂಶವೂ ನಾಳೆ... ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪಾಂಡಿಚೇರಿ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆಯೂ ಶುಕ್ರವಾರ ನಡೆಯಲಿದೆ. ಕರುಣಾನಿಧಿ, ಜಯಲಲಿತಾ, ಮಮತಾ ಬ್ಯಾನರ್ಜಿ, ಬುದ್ಧದೇವ ಭಟ್ಟಾಚಾರ್ಯ ಭವಿಷ್ಯ ಬಹಿರಂಗವಾಗಲಿದೆ.