ಹೊಸ ರಹಸ್ಯ ಭೇದಿಸುತ್ತಿರುವ ಅಣ್ಣಿಗೇರಿ ಬುರುಡೆಗಳು
ಖ್ಯಾತ ಸಂಶೋಧಕ ಡಾ. ಎಂಎಂ ಕಲಬುರ್ಗಿಯವರು, ಯಾವುದೋ ಯುದ್ಧದಲ್ಲಿ ಮಡಿದ ಜನರನ್ನು ಸಾಮೂಹಿಕವಾಗಿ ಹೂಳಲಾಗಿದೆ ಎಂಬ ಸಂಗತಿಯನ್ನು ಅಲ್ಲಗಳೆದಿದ್ದು, ಶಿವನ ಮಹಾನ್ ಭಕ್ತರ ಗುಂಪೊಂದು ಶಿವನನ್ನು ಮೆಚ್ಚಿಸಲೆಂದು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಿದ್ದಾರೆ. ಧಾರ್ಮಿಕ ಕಟ್ಟುಪಾಡುಗಳಿಗೆ ಶರಣಾಗಿ ತಮ್ಮನ್ನು ತಾವೇ ಶಂಭೋಶಂಕರನಿಗೆ ಸಮರ್ಪಿಸಿಕೊಂಡಿರಬಹುದು ಎಂದು ಊಹಿಸಿದ್ದಾರೆ.
ರಹಸ್ಯ ಭೇದಿಸಲು ಬುರುಡೆಗಳ ಬೆನ್ನತ್ತಿರುವ ಸಂಶೋಧಕರು ಜನರ ಸಾವಿನ ಬಗ್ಗೆ ನಾನಾ ವಿವರಣೆಗಳನ್ನು ನೀಡುತ್ತಿದ್ದಾರೆ. ಕೆಲವರು ವಿಜಯನಗರ ಅಥವಾ ಆದಿಲ್ ಶಾಹಿ ಸಾಮ್ರಾಜ್ಯವಿದ್ದ ಕಾಲದಲ್ಲಿ ನಡೆದ ಯುದ್ಧದಲ್ಲಿ ಮಡಿದಿರಬಹುದೆಂದು ಅಂದಾಜು ಮಾಡಿದ್ದಾರೆ. ಇದನ್ನು ಕೂಡ ತಳ್ಳಿಹಾಕಿರುವ ಕಲಬುರ್ಗಿಯವರು, ಬುರುಡೆಗಳ ಮಾಲಿಕರು ಕಟ್ಟಾ ಧಾರ್ಮಿಕ ಸಂಪ್ರದಾಯವಾದಿಗಳಾಗಿದ್ದು, ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.
14ನೇ ಶತಮಾನದಲ್ಲಿ ವೀರ ಗೊಗ್ಗಿದೇವ ಎಂಬುವವರ ಮುಂದಾಳತ್ವದಲ್ಲಿ ವೀರ ಮಹೇಶ್ವರ ಪಂತ್ ಎಂಬ ಸಂಘಟನೆ ಅಸ್ತಿತ್ವದಲ್ಲಿತ್ತು. ಅವರು ಶಿವನ ಕಟ್ಟಾ ಆರಾಧಕರಾಗಿದ್ದರು. ಉತ್ತರ ಭಾರತದಲ್ಲಿರುವ ಅಘೋರಿಗಳಂತೆಯೇ ಇವರು ಕೂಡ ಜಟಾಧರನನ್ನು ಆರಾಧಿಸುತ್ತಿದ್ದರು. ಶಿವನನ್ನು ಮೆಚ್ಚಿಸಲೆಂದೇ ಇಡೀ ಸಂಘಟನೆಯೇ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಯೇ ಹೆಚ್ಚು ಎಂದು ಕಲಬುರ್ಗಿಯವರು ವಿಶ್ಲೇಷಣೆ ಮಾಡಿದ್ದಾರೆ. ಭುವನೇಶ್ವರದ ಭೌತಶಾಸ್ತ್ರ ಇಲಾಖೆ ನಡೆಸಿದ ಪರೀಕ್ಷೆಯಿಂದ ಇವು 638 ವರ್ಷಗಳಷ್ಟು ಹಳೆಯವಾಗಿವೆ ಎಂಬುದು ತಿಳಿದುಬಂದಿದೆ.