ಬಣ್ಣ ಬಿಟ್ಟು ವಿಜ್ಞಾನದ ಕನಸು ಕಂಡ ಹಾಸನದ ಹುಡುಗ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಜಾವಗಲ್ ಅಮಿತ್ ತೇಜಸ್ ಆ ಕನಸುಗಳನ್ನು ಕಣ್ಣಿನಲ್ಲಿ ಕಟ್ಟಿಕೊಂಡಿರುವ ಬಂಗಾರದ ಹುಡುಗ. ಹಾಸನದ ವೆಂಕಟೇಶ್ವರ ಪಿಯು ಕಾಲೇಜಿನಲ್ಲಿ ಓದಿದ ತೇಜಸ್ ಕಂಡ ಆ ಕನಸು ಸಾಕಾರವಾಗಿದೆ. ಆಕಾಶದ ತುದಿ ಮುಟ್ಟಲು ಕೇವಲ ಹತ್ತೇ ಹತ್ತು ಮಾರ್ಕ್ಸು ಕಡಿಮೆ. ಗರಿಷ್ಠ 600 ಅಂಕಗಳಿಗೆ ಗಳಿಸಿದ್ದು 590 ಅಂಕಗಳು. [ಹಾಸನದ ಹುಡುಗ ಎಸ್ಸೆಸ್ಸೆಲ್ಸಿಯಲ್ಲಿ ಫಸ್ಟ್]
ಓದಿ : ಪಿಯುಸಿ ಫಲಿತಾಂಶ : ಉಡುಪಿ ಫಸ್ಟ್, ಯಾದಗಿರಿ ಲಾಸ್ಟ್
ಎಸ್ಎಸ್ಎಲ್ ಸಿ ಮುಗಿಸುವ ಹೊತ್ತಿಗೆ ಆತ ಪಡೆದಿದ್ದು 500ಕ್ಕೂ ಹೆಚ್ಚು ಪ್ರಶಸ್ತಿಗಳು. ಕಲೆ ಓದಿ ಮಿಸ್ಟರ್ ಕಲಾಕಾರ್ ಆಗು ಎನ್ನುವುದು ತಂದೆ ನಾಗರಾಜ್ ಅವರ ಹೆಬ್ಬಯಕೆಯಾದರೆ, ವಿಜ್ಞಾನ ತೆಗೆದುಕೊಂಡು ಏನನ್ನಾದರೂ ಸಾಧಿಸಬೇಕು ಎಂಬ ಹಠ. ತೇಜಸ್ ಇಟ್ಟ ಗುರಿ ತಪ್ಪಿಲ್ಲ. ಇಡೀ ರಾಜ್ಯದ ಜನತೆ ಹೆಮ್ಮೆ ಪಟ್ಟುಕೊಳ್ಳುವಂತೆ ಅಂಕಗಳನ್ನು ಪಡೆದಿದ್ದಾರೆ. ತಾಯಿ ವೀಣಾಗಂತೂ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ.
ಇದನ್ನೂ ಓದಿ : ಮುಂದಿನ ಬಾರಿ ಪಾಸಾಗ್ತಿನಿ ಅನ್ನಿ, ಆತ್ಮಹತ್ಯೆ ಬೇಡ
ಈ ಎರಡು ವರ್ಷ ಸತತ ಅಧ್ಯಯನದಲ್ಲಿ ತೊಡಗಿದ ಅಮಿತ್ ತೇಜಸ್ ತನ್ನ ಅಚ್ಚುಮೆಚ್ಚಿನ ಬಣ್ಣಬಳಿಯುವ ಬ್ರಷ್ ಅನ್ನು ಕೈಗೊತ್ತಿಕೊಳ್ಳಲಿಲ್ಲ. ಪ್ರತಿದಿನ 6 ಗಂಟೆಗಳ ಕಾಲ ಅಧ್ಯಯನ. ವಿಜ್ಞಾನದಲ್ಲಿ ಪರ್ಫೆಕ್ಟ್ 100. ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರದಲ್ಲಿ ನೂರಕ್ಕೆ ಒಂದೇ ಒಂದು ಕಡಿಮೆ. ಕನ್ನಡದಲ್ಲೂ 98 ಅಂಕ ಗಳಿಸಿ ಕನ್ನಡನಾಡಿಗೆ ಹೆಮ್ಮೆ ತಂದಿದ್ದಾರೆ. ಆಂಗ್ಲ ಭಾಷೆಯಲ್ಲಿ 93 ಅಂಕ ಪಡೆದಿದ್ದಾರೆ.
ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದಿರುವ ತೇಜಸ್ ಎಂಬಿಬಿಎಸ್ ಸೀಟು ಪಡೆಯುವ ವಿಶ್ವಾಸ ಹೊಂದಿದ್ದಾರೆ. ಎಂಬಿಬಿಎಸ್ ಮುಗಿಸಿದ ನಂತರ ಐಎಎಸ್ ತೆಗೆದುಕೊಂಡು ಜನರ ಸೇವೆ ಮಾಡುವ ಬಯಕೆ ತೇಜಸ್ ಹೊಂದಿದ್ದಾರೆ. ಡಾಕ್ಟರಾಗುವ, ಐಎಎಸ್ ಮಾಡಿ ಜನರ ಸೇವೆ ಮಾಡುವ ಕನಸುಗಳ ಜೊತೆಗೆ ಬಣ್ಣದ ಕನಸುಗಳನ್ನೂ ತುಂಬಿಕೊಳ್ಳಲಿ ಎಂಬುದು ನಮ್ಮ ಹಾರೈಕೆ.
ಎಸ್ಎಸ್ಎಲ್ ಸಿ 2011 ಫಲಿತಾಂಶ ಪ್ರಕಟ