ಮಕ್ಕಳ ತೊರೆದು ಬನಶಂಕರಿಯಲ್ಲಿ ದಂಪತಿ ಆತ್ಮಹತ್ಯೆ
ಮರುದಿನ ನಡೆದ ಘಟನೆ ಮಾತ್ರ ತಂದೆ ಮತ್ತು ಕುಟುಂಬದವರನ್ನು ದಂಗುಬಡಿಸಿರುವುದು ಮಾತ್ರವಲ್ಲ ಮುದ್ದು ಕಂದಮ್ಮಗಳಿಗೆ ಇನ್ನು ಮುಂದೆ ಅಪ್ಪ-ಅಮ್ಮನ ಪ್ರೀತಿ ಸಿಗದಂತೆ ಮಾಡಿದೆ. ಯಾರಿಗೆ ಯಾವ ಸೂಚನೆಯನ್ನೂ ನೀಡದೆ, ಯಾವುದೇ ಮರಣಪತ್ರವನ್ನು ಕೂಡ ಬರೆಯದೆ ಮಕ್ಕಳ ಅಪ್ಪ ಗಂಗಾಧರ (30), ಅಮ್ಮ ಕಾವ್ಯಾ (25) ಇಬ್ಬರೂ ನೇಣಿಗೆ ಶರಣಾಗಿ ಇಹಲೋಕ ತ್ಯಜಿಸಿದ ಘಟನೆ ಬನಶಂಕರಿಯ ಕಾವೇರಿ ನಗರದಲ್ಲಿ ಮಂಗಳವಾರ ಜರುಗಿದೆ.
ಮೂರು ವರ್ಷದ ಮಂಗಳಾ ಮತ್ತು ಎರಡು ವರ್ಷದ ದಿವ್ಯಾ ಬೆಳಗಿನ ಜಾವದಲ್ಲಿ ಕೆಲ ಹೊತ್ತಿನಿಂದ ಒಂದೇ ಸವನೆ ಅಳುತ್ತಿದ್ದುದನ್ನು ಗಮನಿಸಿದ ಪಕ್ಕದ ಮನೆಯ ಶಾಂತಮ್ಮ ಎಂಬುವವರು ಅವರಿರುವ ಕಟ್ಟಡದಲ್ಲೇ ಇರುವ ಮಕ್ಕಳ ಅಜ್ಜ ಮತ್ತು ಗಂಗಾಧರ ಅವರ ತಂದೆ ಬೈರಪ್ಪನವರಿಗೆ ತಿಳಿಸಿದ್ದಾರೆ. ಕಿಟಕಿಯಿಂದ ಇಣುಕಿ ನೋಡಿದಾಗ ಗಂಗಾಧರ ಮತ್ತು ಕಾವ್ಯಾ ಮನೆಯಲ್ಲಿ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಕೂಡಲೆ ಪೊಲೀಸರಿಗೆ ತಿಳಿಸಿದ್ದಾರೆ.
ಆತ್ಮಹತ್ಯೆಯಂಥ ಹೀನ ಕೃತ್ಯಕ್ಕಿಳಿಯಲು ಅವರಿಬ್ಬರಿಗೆ ಯಾವುದೇ ಕಾರಣಗಳಿರಲಿಲ್ಲ. ಹಣಕಾಸಿನ ತೊಂದರೆಯೂ ಇರಲಿಲ್ಲ ಎಂದು ತಂದೆ ಭೈರಪ್ಪ ಪೊಲೀಸರಿಗೆ ತಿಳಿಸಿದ್ದಾರೆ. ತನಿಖೆ ನಡೆಸಿರುವ ಪೊಲೀಸರ ಪ್ರಕಾರ, ಗಂಗಾಧರ ಇತ್ತೀಚೆಗೆ ಬೆಳ್ಳಿ ಆಭರಣಗಳನ್ನು ಗಿರವಿ ಇಟ್ಟಿದ್ದ. ಉತ್ತಮ ಸ್ವಭಾವದವನಾಗಿದ್ದ ಗಂಗಾಧರ ಮತ್ತು ಕಾವ್ಯಾ ನಡುವೆ ದಾಂಪತ್ಯದ ಬಿರುಕೂ ಇರಲಿಲ್ಲ. ಆದರೆ, ಅತ್ತೆಯಿಂದ ಕಾವ್ಯಾಳಿಗೆ ಆಗಾಗ ಕಿರುಕುಳವಾಗುತ್ತಿತ್ತು ಎಂದು ನೆರೆಹೊರೆಯವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಆತ್ಮಹತ್ಯೆಗಳ ನಗರವಾಗಿ ಪರಿವರ್ತಿತವಾಗುತ್ತಿದೆ. ಸಣ್ಣ ಕುಂದುಕೊರತೆಗಳೂ ಆತ್ಮಹತ್ಯೆಗಳಿಗೆ ಕಾರಣವಾಗುತ್ತಿವೆ. ಈ ಪ್ರಕರಣದಲ್ಲಂತೂ ಪುಟ್ಟ ಮಕ್ಕಳಿದ್ದಾರೆ ಎಂಬ ವಿವೇಚನೆಯೂ ಇಲ್ಲದೆ ಅಪ್ಪಅಮ್ಮಂದಿರು ನೆಮ್ಮದಿಯಿಂದ ಪರಲೋಕಕ್ಕೆ ಪಯಣ ಬೆಳೆಸಿದ್ದಾರೆ. ಇನ್ನು ಮುಂದೆ ಮಕ್ಕಳನ್ನು ನೋಡಿಕೊಳ್ಳುವವರಾರು? ಅವರ ಭವಿಷ್ಯವೇನು? ಎಂಬ ಬಗ್ಗೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನಿರ್ಮಲ ಮನಸ್ಸಿನಿಂದ ಯೋಚಿಸಿದ್ದರೆ ಈ ದುರಂತ ತಡೆಯಬಹುದಿತ್ತೇನೋ?