ರೈತರಿಗೆ ಚಿಯರ್ಸ್: ಬರಲಿದೆ ಬೀಟ್ ರೂಟ್ ಗುಂಡು
ಕಬ್ಬಿನ ಮೊಲಾಸಿಸ್ ಸದಾ ಕಾಲದಲ್ಲೂ ಲಭಿಸುವುದಿಲ್ಲ. ಆ ಕೊರತೆಯನ್ನು ಸಕ್ಕರೆ ಅಂಶ ಹೆಚ್ಚಾಗಿರುವ ಬೀಟ್ ರೂಟ್ ನಿಂದ ಪರಿಹರಿಸಿಕೊಳ್ಳುವ ಸಲುವಾಗಿ ಕೆಲ ಡಿಸ್ಟಲರಿಗಳು ಮುಂದಾಗಿವೆ. ಇದರ ಸಾಧ್ಯಾಸಾಧ್ಯತೆಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ವರದಿ ಸಲ್ಲಿಸಿದ್ದು, ರಾಜ್ಯ ಸರಕಾರ ರಾಜ್ಯ ಸರಕಾರ ಬೀಟ್ ರೂಟ್ ಗುಂಡು ಹೊಡೆಯಲು ಅನುಮತಿಸಿದೆ.
ರೈತರಿಗೆ ಅನುಕೂಲ: ಕಡಿಮೆ ನೀರಿನಲ್ಲಿ ವರ್ಷಕ್ಕೆ ಎರಡು ಬಾರಿ ಬೀಟ್ ರೂಟ್ ಬೆಳೆ ಬೆಳೆಯಬಹುದಾಗಿದೆ. ಇಂತಹ ಬೆಳೆಯನ್ನು ಮದ್ಯ ತಯಾರಿಕೆಗೆ ಬಳಸಿದರೆ ಕೃಷಿಕರಿಗೆ ಹೆಚ್ಚಿನ ನೆರವಾಗಲಿದೆ. ಹಾಗೆಂದು ಬೆಳೆದದ್ದೆಲ್ಲ ಮದ್ಯಕ್ಕೆ ಸೂಕ್ತ ಎನ್ನುವಂತಿಲ್ಲ. ಏಕೆಂದರೆ ಕೆಲವು ವಿದೇಶಿ ಹೈಬ್ರಿಡ್ ತಳಿಯಿಂದ ಮಾತ್ರವೇ ಮದ್ಯ ತಯಾರಿಸಲು ಸಾಧ್ಯ. ಪ್ರಸ್ತುತ, ಕರ್ನಾಟಕದಲ್ಲಿ 2,400 ಹೆಕ್ಟೇರ್ ಪ್ರದೇಶದಲ್ಲಿ 41,000 ಟನ್ ಬೀಟ್ ರೂಟ್ ಬೆಳೆಯಲಾಗುತ್ತಿದೆ.
ಬೀಟ್ ರೂಟ್ ಮದ್ಯ ತಯಾರಿ ವಿಧಾನ: ಬೀಟ್ ರೂಟ್ ಅನ್ನು ಸಣ್ಣದಾಗಿ ತುರಿದುಕೊಳ್ಳಬೇಕು. ನಂತರ ಬಿಸಿ ನೀರಿನಲ್ಲಿ ಕುದಿಸಬೇಕು. ಬಳಿಕ ಕಡುಗೆಂಪು ಬಣ್ಣಕ್ಕೆ ತಿರುಗಿದ ನೀರನ್ನು ಸೋಸಿಕೊಳ್ಳಬೇಕು. ಇದಕ್ಕೆ ನಿಗದಿತ ಪ್ರಮಾಣದಲ್ಲಿ ಸಕ್ಕರೆ, ನಿಂಬೆಹಣ್ಣಿನ ರಸ ಸೇರಿದಂತೆ ಕೆಲವು ರಾಸಾಯನಿಕಗಳನ್ನು ಬೆರೆಸಬೇಕು. ಹೀಗೆ ಮಿಶ್ರಣಗೊಂಡ ದ್ರವ ಪದಾರ್ಥವನ್ನು 21 ದಿನಗಳವರೆಗೆ ಮುಚ್ಚಿಡಬೇಕು. ಆದರೆ ಪ್ರತಿದಿನವೂ ನಿಶ್ರಣನ್ನು ಕಲುಕುತ್ತಿರಬೇಕು. ನಿಗದಿತ ಅವಧಿ ಬಳಿಕ ಈ ಮಿಶ್ರಣ ವೈನ್ ರೂಪಕ್ಕೆ ಮಾರ್ಪಡುತ್ತದೆ. ಮಿಶ್ರಣವನ್ನು ಸೋಸಿ ಕುಡಿದರೆ ನಿಧಾನವಾಗಿ ಕಿಕ್ ಏರತೊಡಗುತ್ತದೆ.