ದೆಹಲಿಯ ಕನ್ನಡಿಗರಿಂದ ಬಸವಣ್ಣನ ತತ್ತ್ವ ಚಿಂತನೆ
ಮೇ 7, 2011ರಂದು ದೆಹಲಿ ಕರ್ನಾಟಕ ಸಂಘ, ಬಸವ ಇಂಟರ್ ನ್ಯಾಷನಲ್ ಸೆಂಟರ್, ನವದೆಹಲಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬೀದರ್ ನ ಬಸವ ಸೇವಾ ಪ್ರತಿಷ್ಠಾನದ ಬಸವ ಅಧ್ಯಯನ ಕೇಂದ್ರದ ನಿರ್ದೇಶಕರಾದ ರಂಜಾನ್ ದರ್ಗಾ ಬಸವಣ್ಣನ ತತ್ತ್ವಗಳನ್ನು ಕುರಿತು ಮಾತನಾಡಿದರು.
ಲಿಂಗಾಯತ ಧರ್ಮ ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಾ ಹಲವು ವೈರುಧ್ಯಗಳಲ್ಲಿ ನರಳುತ್ತಿದೆ. 12ನೇ ಶತಮಾನದಲ್ಲಿಯೇ ಬಸವಣ್ಣನವರು ಜ್ಞಾನ ಮತ್ತು ಪ್ರಜ್ಞೆ, ಅರಿವು ಮತ್ತು ಆಚಾರ, ನಡೆ ಮತ್ತು ನುಡಿ ಇವುಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ನುಡಿದಂತೆ ನಡೆಯಬೇಕು. ನುಡಿಯುವುದೊಂದು ನಡೆಯುವುದೊಂದು ಆಗಬಾರದು, ಅರಿವೇ ಗುರು, ಆ ಗುರು ನಮ್ಮೊಳಗೇ ಇದ್ದಾನೆ ಎಂದು ಮಹಾನ್ ಅರ್ಥಶಾಸ್ತ್ರಜ್ಞ, ಮುತ್ಸದ್ಧಿ, ಸಮಾಜ ಸುಧಾರಕ, ಕ್ರಾಂತಿಯೋಗಿ ಬಸವಣ್ಣನವರನ್ನು ಮನಮುಟ್ಟುವಂತೆ ಅರ್ಥೈಸಿದರು.
ದೆಹಲಿ ಕನ್ನಡಿಗ, ಹಿಂದೂಸ್ತಾನಿ ಗಾಯಕ ಭೀಮ್ ಸೇನ್ ಭಜಂತ್ರಿ ಅವರು 'ಛಲಬೇಕು ಶರಣಂಗೆ' ವಚನ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ. ವೆಂಕಟಾಚಲ ಹೆಗಡೆ ಅವರು ದೆಹಲಿ ಕರ್ನಾಟಕ ಸಂಘ ಹಲವಾರು ದಶಕಗಳಿಂದ ಬಸವ ಜಯಂತಿಯನ್ನು ಆಚರಿಸಿಕೊಂಡು ಬಂದುದನ್ನು ಸ್ಮರಿಸಿದರು. ವಿಶೇಷ ಉಪನ್ಯಾಸಕಾರ ರಮಜಾನ್ ದರ್ಗಾ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ, ಹಾಗೂ ಬಸವ ಇಂಟರ್ ನ್ಯಾಷನಲ್ ಸೆಂಟರ್ನ ಅಧ್ಯಕ್ಷ, ಅಮರನಾಥ ತಳವಾಡೆ ಅವರನ್ನು ಸ್ವಾಗತಿಸಿದರು.
ಜಾನಪದ ವಿದ್ವಾಂಸ, ವಿಮರ್ಶಕ ಡಾ. ಪುರುಷೋತ್ತಮ ಬಿಳಿಮಲೆ ತಮ್ಮ ನಿಡುಗಾಲದ ಗೆಳೆಯ ರಂಜಾನ್ ದರ್ಗಾ ಅವರನ್ನು 'ಕ್ರಾಂತಿಯ ಮಂತ್ರ ಹೇಳುವ ಕಾಲದಲ್ಲಿ ಶಾಂತಿಯ ಮಂತ್ರ ಹೇಳಿದ ಸಂತ, ಶರಣ ರಂಜಾನ್ ದರ್ಗಾ ಅವರನ್ನು ಆತ್ಮೀಯತೆಯಿಂದ ಪರಿಚಯಿಸಿದರು. ವಚನ ಸಾಹಿತ್ಯವನ್ನು ಕ್ರೊಢೀಕರಿಸಿ ತಮ್ಮ ಬರಹಗಳ ಮೂಲಕ ಪುನಃ ಪರಿಚಯಿಸುವ ಕಾರ್ಯವನ್ನು ರಂಜಾನ್ ದರ್ಗಾ ಆಸಕ್ತಿ ವಹಿಸಿ ಮಾಡುತ್ತಿದ್ದುದರಿಂದ ಅವರು ನಮ್ಮ ಕಾಲದ ಪ್ರಮುಖ ಚಿಂತಕರಾಗಿ ವಿಶಿಷ್ಟರಾಗುತ್ತಾರೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸನ್ಮಾನ್ಯ ಪ್ರಭಾಕರ್ ಕೋರೆ ಅವರು ಬಸವ ಜಯಂತಿಯ ದ್ಯೋತಕವಾಗಿ ದೀಪಬೆಳಗಿಸಿದರು. ಖ್ಯಾತ ಗಾಯಕಿ ವೀಣಾ ಮರಡೂರ್ ಸುಶ್ರಾವ್ಯವಾಗಿ 'ಕಲ್ಯಾಣವೆಂಬ ಹಣತೆಯಲ್ಲಿ...' ವಚನವನ್ನು ಹಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ್ ಅವರು ವಂದಿಸಿದರು. ಭೀಮಸೇನ್ ಭಜಂತ್ರಿ ಮತ್ತು ವೀಣಾ ಮರಡೂರ್ ಅವರು ವಚನ ರಸಾಮೃತದಿಂದ ಸುಂದರ ಸಂಜೆಯನ್ನು ಅರ್ಥಪೂರ್ಣಗೊಳಿಸಿದರು.