ಅಧಿಕಾರ ದುರುಪಯೋಗ ಸಾಬೀತಾದರೆ ನೇಣಿಗೆ ಶರಣಾಗುವೆ
ಜಾತ್ಯತೀತ ಜನತಾದಳ ಪರಿವಾರದ ನಾಯಕರೂ ಆದ ಕುಮಾರಸ್ವಾಮಿ ಅವರು ಭಾನುವಾರ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತಾ ಯಡಿಯೂರಪ್ಪಗೆ ಈ ಸವಾಲು ಹಾಕಿದ್ದಾರೆ. ಯಡಿಯೂರಪ್ಪ ಅವರ ಭ್ರಷ್ಟಾಚಾರದ ವಿರುದ್ಧ ಜೆಡಿಎಸ್ ಈ ವ್ಯಾಪಕ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದೆ.
ನಮ್ಮ ಕುಟುಂಬದ ವಿರುದ್ಧ ಅಪಪ್ರಚಾರ ಮಾಡಲು ಸರಕಾರದ ವೇತನ ನೀಡಿ, ಒಬ್ಬರನ್ನು ನೇಮಕ ಮಾಡಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿದ್ದಾರೆ. ಇದಕ್ಕೆ ನಾನು ಬಗ್ಗುವುದಿಲ್ಲ. ನಮ್ಮ ವಿರುದ್ಧ ದಾಖಲೆಗಳಿವೆ ಎಂದು ಬಜೆಟ್ ಅಧಿವೇಶನದಲ್ಲಿ ಸೂಟ್ ಕೇಸ್ ತೋರಿಸಿದರು. ನಂತರ ನಾವು ಅಧಿಕಾರ ದುರುಪಯೋಗ ಮಾಡಿಕೊಂಡು ಗೋಮಾಳ ಭೂಮಿ ಕಬಳಿಸಿರುವುದಾಗಿ ಯಡಿಯೂರಪ್ಪನವರು ಬೊಬ್ಬೆ ಹೊಡೆದರು. ಒಂದು ವಾರದೊಳಗೆ ಅದನ್ನು ಸರಕಾರ ವಶಕ್ಕೆ ತೆಗೆದುಕೊಂಡು ದಲಿತರಿಗೆ ಹಂಚುವುದಾಗಿ ಪ್ರಕಟಿಸಿದರು.
ಯಾವುದನ್ನೂ ಮಾಡಿ ತೋರಿಸಿಲ್ಲ. ಸುಮ್ಮನೇ ವಾಗ್ದಾಳಿ ನಡೆಸುತ್ತಾರೆಯೇ ಹೊರತು ಆಡಳಿತಾರೂಢರಾಗಿದ್ದುಕೊಂಡೂ ಯಾವುದೇ ತನಿಖೆ ಮಾಡಿ ಕ್ರಮ ಕೈಗೊಂಡಿಲ್ಲ ಬೊಗಳೆ ಬಿಡುವ ಬದಲು ಆರೋಪ ಸಾಬೀತುಪಡಿಸಲಿ, ನಾನೇ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ' ಎಂದು ಕುಮಾರಸ್ವಾಮಿ ಅವರು ಘೋಷಿಸಿದರು.