ರಾಯಚೂರು ಡಿಪೊ: 47 ಕಂಡೆಕ್ಟರ್ ಮತ್ತು ಚಾಲಕರ ವಜಾ
2010ರ ಮಾರ್ಚ್ ನಿಂದ 2011ರ ಮಾರ್ಚ್ ವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗಿರುವವರನ್ನು ವಜಾಗೊಳಿಸಲಾಗಿದೆ. ಇಷ್ಟೊಂದು ಜನರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರೂ ಸ್ಪಷ್ಟಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ವಜಾ ಮಾಡಿರುವುದಾಗಿ ರಾಯಚೂರು ಬಸ್ ಡಿಪೊ ಮೂಲಗಳು ತಿಳಿಸಿವೆ.
ಇದನ್ನು ಎನ್ಇಎಸ್ಆರ್ಟಿಸಿ ಶಿಸ್ತಿನ ಕ್ರಮ ಎಂದರೂ ವಜಾಗೊಂಡಿರುವ ನೌಕರರು ಹೇಳುವುದೇ ಬೇರೆ. ನಾವು ಗೈರುಹಾಜರಾಗಲು ಮೇಲಾಧಿಕಾರಿಗಳ ಕಿರುಕುಳವೇ ಕಾರಣ. ರೂಟ್ ಹಂಚಿಕೆಗೆ ಲಂಚ ಕೇಳುತ್ತಿದ್ದರು. ಅಶಿಸ್ತಿನ ನೆಪವೊಡ್ಡಿ ಬೇಕಾಬಿಟ್ಟಿ ಶುಲ್ಕ ವಿಧಿಸುತ್ತಿದ್ದರು ಎನ್ನುತ್ತಾರೆ.
"ನಮ್ಮನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದು ಪ್ರೊಬೆಷನರಿ ಅವಧಿಗೆ ಪರಿಗಣಿಸಲೇ ಇಲ್ಲ. ತಿಂಗಳಿಗೆ ಕೇವಲ ಎರಡುವರೆ ಸಾವಿರ ರೂಪಾಯಿ ಸಂಬಲ ನೀಡಲಾಗುತ್ತಿತ್ತು. ಸೇವೆಯನ್ನು ಖಾಯಂಗೊಳಿಸುವಂತೆ ಮೇಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇಂಥಹ ದಬ್ಬಾಳಿಕೆಯಿಂದ ಸಂಸ್ಥೆಯ ಎಲ್ಲಾ ನೌಕರರು ಗೈರುಹಾಜರಾಗುವುದರಲ್ಲಿ ಸಂಶಯವಿಲ್ಲ" ಎಂದು ವಜಾಗೊಂಡ ನೌಕರರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಅವರು ಹೆಸರನ್ನು ಬಹಿರಂಗಪಡಿಸಲು ಇಚ್ಚಿಸಲಿಲ್ಲ. (ಯುಎನ್ಐ)