ಆರೋಗ್ಯಕಾರಿ ಆಡಿನ ಹಾಲು ಮಾರುಕಟ್ಟೆಗೆ ಬಿಡುಗಡೆ
ಜೈಕರ್ ಕೈರನ್ ಎಂಬುವವರು ಉಡುಪಿಯಿಂದ 25 ಕಿಮೀ ದೂರದಲ್ಲಿರುವ ನಡೂರು ಗ್ರಾಮದಲ್ಲಿ ಈ ಫಾರಂ ಅನ್ನು 2001ರಲ್ಲಿ ಸ್ಥಾಪಿಸಿದ್ದಾರೆ. ಸದ್ಯಕ್ಕೆ ಇಲ್ಲಿ ದಿನನಿತ್ಯ 500 ಲೀಟರ್ ಆಡಿನ ಹಾಲು ಉತ್ಪಾದನೆಯಾಗುತ್ತಿದೆ. ಮುಂದಿನ ವರ್ಷದ ವೇಳೆಗೆ ಹಾಲು ಉತ್ಪಾದನೆ ಸಾಮರ್ಥ್ಯ 1,000 ಲೀಟರ್ ಗೆ ಏರಲಿದೆ ಎಂದು ಕೈರನ್ ತಿಳಿಸಿದ್ದಾರೆ.
ಮಹಾತ್ಮ ಗಾಂಧೀಜಿ ಅವರು ಆಡಿನ ಹಾಲು ಆರೋಗ್ಯಕರವೆಂದು ಸೇವನೆ ಮಾಡುತ್ತಿದ್ದರು. ಮಕ್ಕಳಿಗೆ ಅಸ್ತಮಾ, ದೃಷ್ಟಿದೋಷ, ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆಗಳಿಗೆ ಆಡಿನ ಹಾಲನ್ನು ನಿಯಮಿತವಾಗಿ ಸೇವನೆ ಮಾಡಿದರೆ ಪರಿಹಾರ ಸಿಗುತ್ತದೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ರಕ್ತದಲ್ಲಿ ಲವಣಾಂಶ, ಜೀವಸತ್ವ ಮತ್ತು ಹಿಮೊಗ್ಲೋಬಿನ್ ಪ್ರಮಾಣ ಏರಿಕೆಯಾಗುತ್ತದೆ.
ಆಡಿನ ಹಾಲಿನಲ್ಲಿ ಪ್ರತ್ಯಾಮ್ಲೀಯ ಗುಣ ಇರುವುದರಿಂದ ಹೊಟ್ಟೆ ಹುಣ್ಣು, ಅರೆ ತಲೆನೋವು ನಿವಾರಣೆಯಾಗುತ್ತದೆ. ಇನ್ನು, ಆಡಿನ ಹಾಲಿನಲ್ಲಿ ಪ್ರೊಟೀನ್ ಹೆಚ್ಚಾಗಿದ್ದು, ಅದನ್ನು ಒಂದು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಪ್ರತಿದಿನ ಕೊಡುವುದರಿಂದ ಮಕ್ಕಳ ಬೆಳವಣಿಗೆ ಸದೃಢವಾಗಿರುತ್ತದೆ ಎಂದು ಕೈರನ್ ವಿವರಿಸುತ್ತಾರೆ. ನೀಲಗಿರೀಸ್ ಮಳಿಗೆಗಳು ಸೇರಿದಂತೆ ನಿಗದಿತ ಸ್ಥಳಗಳಲ್ಲಿ ಈ ಹಾಲು ಮಾರಾಟಕ್ಕೆ ದೊರಕುತ್ತದೆ. ವಿದೇಶಗಳಲ್ಲಿ ಆಡಿನ ಹಾಲು ಮತ್ತು ಅದರ ಉತ್ಪನ್ನಗಳು ವ್ಯಾಪಕವಾಗಿ ಬಳಕೆಯಲ್ಲಿವೆ.