ಕನ್ನಿಮೋಳಿ ಜಾಮೀನು ವಿಚಾರಣೆ : ಮೇ 14 ತೀರ್ಪು
ಸಿಬಿಐ ವಿಶೇಷ ನ್ಯಾಯಾಲಯವು ಕನ್ನಿಮೋಳಿ ಜಾಮೀನು ತೀರ್ಪನ್ನು ಮೇ 14ಕ್ಕೆ ಕಾಯ್ದಿರಿಸಿದೆ. ಜೊತೆಗೆ ಇಂದಿನ ವಿಚಾರಣೆಯಲ್ಲಿ 2ಜಿ ಸ್ಪೆಕ್ಟಮ್ ಹಂಚಿಕೆಯಲ್ಲಿ ಕನ್ನಿಮೋಳಿ ಆಕ್ಟಿವ್ ಆಗಿದ್ದರು ಎಂದು ಸಿಬಿಐ ನ್ಯಾಯಾಲಯವು ಬಲವಾಗಿ ವಾದಿಸಿದೆ. ಕನ್ನಿಮೋಳಿ ಅವರು ಕಲೈಞ್ಙರ್ ಟಿವಿ ವಾಹಿನಿಯ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದಾರೆ. ಹೀಗಾಗಿ ತಮ್ಮ ಸಂಸ್ಥೆಯಲ್ಲಿ ನಡೆದ ಇಷ್ಟೊಂದು ಬೃಹತ್ ಪ್ರಮಾಣದ ಹಣಕಾಸು ವ್ಯವಹಾರದ ಅರಿವಿಲ್ಲವೆಂಬ ವಾದ ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ ಎಂದಿದೆ.
"ಕಲೈಞ್ಙರ್ ಟಿವಿ ವಾಹಿನಿಗೆ ಸುಮಾರು 200 ಕೋಟಿ ರೂ. ನೀಡಿರುವ ಬಗ್ಗೆ ಆಕೆಗೆ ಏನೂ ತಿಳಿದಿಲ್ಲವೆಂಬುದು ಸಂಪೂರ್ಣ ಸುಳ್ಳು. ಯಾಕೆಂದರೆ ಆ ಸಮಯದಲ್ಲಿ ಆಕೆ ಅದರ ನಿರ್ದೇಶಕಿಯಾಗಿದ್ದರು. ಸಂಸ್ಥೆಗೆ ಇಷ್ಟೊಂದು ಮೊತ್ತದ ಹಣ ಪಾವತಿಯಾದ ನಂತರ ಅವರು ಟಿವಿ ಚಾನೆಲ್ ಗೆ ರಾಜಿನಾಮೆ ನೀಡಿದ್ದಾರೆ. ಇದೆಲ್ಲವೂ 2ಜಿ ಸ್ಪೆಕ್ಟ್ರಂ ಸ್ಕಾಮ್ ನ ನಾಟಕದಲ್ಲಿ ಕನ್ನಿಮೋಳಿ ಆಕ್ಟಿವ್ ಆಗಿದ್ದರು ಎಂದು ನಿರೂಪಿಸಿದೆ" ಎಂದು ಸಿಬಿಐ ವಕೀಲ ಯು.ಯು. ಲಲಿತ್ ಮೋದಿ ವಾದಿಸಿದರು.
"ಕನ್ನಿಮೋಳಿ ಅವರು ರಾಜಾ ಅವರಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ ಮತ್ತು ದೂರಸಂಪರ್ಕ ಕಂಪನಿಗಳಿಗೆ ಸ್ಪೆಕ್ಟ್ರಮ್ ಹಂಚಿಕೆಯಲ್ಲಿ ಇವರ ಪಾತ್ರವೂ ಇದೆ. ಸುಮಾರು 47.51 ಕೋಟಿ ರೂಪಾಯಿ ವಹಿವಾಟಿನ ಕಲೈಞ್ಙರ್ ಟಿವಿಗೆ ಸುಮಾರು 200 ಕೋಟಿ ನೀಡಲಾಗಿದೆ. ಪೆಯ್ಡ್ ಅಪ್ ಕ್ಯಾಪಿಟಲ್ ಎಂಬುದು ಕೇವಲ ಒಂದು ಲಕ್ಷ ರೂಪಾಯಿ ಆಗಿದೆ. ಯಾವುದೇ ದಾಖಲೆ ನೀಡದೆ ಸುಮಾರು 200 ಕೋಟಿ ರೂ.ವನ್ನು ನೀಡಲಾಗಿದೆ. ಈ ಹಣ ಪಾವತಿ ಸಂದೇಹಕ್ಕೆ ಎಡೆ ಮಾಡಿಕೊಡುತ್ತದೆ" ಎಂದು ಅವರು ವಾದಿಸಿದ್ದಾರೆ.
ನ್ಯಾಯಾಲಯ ತೀರ್ಪನ್ನು ಮೇ 14ಕ್ಕೆ ಕಾಯ್ದಿರಿಸಿರುವುದು ರಾಜಕೀಯ ಕೆಸರಾಟಗಳಿಗೆ ಎಡೆ ಮಾಡಿಕೊಡಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಎಂದು ಹಲವು ಜನರು ಪ್ರತಿಕ್ರಿಯಿಸಿದ್ದಾರೆ. ಯಾಕೆಂದರೆ ಮೇ 13ರಂದು ತಮಿಳುನಾಡು ಫಲಿತಾಂಶವಿದ್ದು 14ಕ್ಕೆ ನ್ಯಾಯಾಲಯ ತೀರ್ಪು ಪ್ರಕಟಿಸುವುದು ಇಂತಹ ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.