ಚಿನ್ನಸ್ವಾಮಿ ಕ್ರೀಡಾಂಗಣ ಶಿಲ್ಪಿ ಕೆಪಿ ಪದ್ಮನಾಭ ಇನ್ನಿಲ್ಲ
ಜನವರಿ 14, 1937ರಲ್ಲಿ ತುಮಕೂರಿನಲ್ಲಿ ಜನಿಸಿದ ಪದ್ಮನಾಭ ಅವರು ಆರಂಭಿಕ ಶಿಕ್ಷಣವನ್ನು ತವರಿನಲ್ಲಿ ಪಡೆದರೆ, ಸಿವಿಲ್ ಇಂಜಿನಿಯರಿಂಗ್ ಮಾಡಿದ್ದು ದಾವಣಗೆರೆಯ ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪ (ಬಿಡಿಟಿ) ಇಂಜಿನಿಯರಿಂಗ್ ಕಾಲೇಜಿನಲ್ಲಿ. ಪದವಿಯ ನಂತರ ಶಿಕ್ಷಕ ವೃತ್ತಿಯನ್ನು ಆರಿಸಿಕೊಂಡರೂ ಮುಂದೆ 1965ರಲ್ಲಿ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಕೆಪಿ ಪದ್ಮನಾಭ ಅಂಡ್ ಅಸೋಸಿಯೇಟ್ಸ್ ಪ್ರಾರಂಭಿಸಿ ಕಟ್ಟಡ ನಿರ್ಮಾಣದಲ್ಲಿ ತೊಡಗಿದರು.
ಪದ್ಮನಾಭ ಅವರು ಸಿನೆಮಾ ಥಿಯೇಟರಿನಿಂದ ಹಿಡಿದು ಶಾಲೆ, ರೆಸಾರ್ಟ್, ಆಸ್ಪತ್ರೆಗಳನ್ನು ನಿರ್ಮಿಸುವಲ್ಲಿ ತಮ್ಮ ಕೈಚಳಕ ತೋರಿದ್ದಾರೆ. ಅವರ ನಿರ್ಮಾಣದ ಮಾಸ್ಟರ್ ಪೀಸ್ ಅಂದರೆ ಬೆಂಗಳೂರಿನ ಹೃದಯಭಾಗದಲ್ಲಿರುವ, ಅನೇಕ ಐತಿಹಾಸಿಕ ಕ್ರಿಕೆಟ್ ಪಂದ್ಯಗಳಿಗೆ ಮತ್ತು ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗೂ ಸಾಕ್ಷಿಯಾಗಿರುವ ಚಿನ್ನಸ್ವಾಮಿ ಕ್ರೀಡಾಂಗಣ. ತಮ್ಮ ಹಿರಿಯ ಮಗ ಸುಕೆನ್ ಸಹಕಾರದೊಂದಿಗೆ ಇಂದು ನಿರ್ಮಾಣ ಹಂತದಲ್ಲಿರುವ ಬೆಂಗಳೂರು ಮೆಟ್ರೋ ಕೂಡ ಪದ್ಮನಾಭ ಅವರ ಕಲ್ಪನೆಯೆ.
ಜೀವನದಲ್ಲಿಯೂ ಅಳವಡಿಸಿಕೊಂಡಿದ್ದ ಸರಳತೆಯೇ ಅವರ ಡಿಸೈನ್ ಗಳಲ್ಲಿ ಹಾಸುಹೊಕ್ಕಾಗಿತ್ತು. ಅನೇಕ ಸಮಾಜ ಸೇವೆಗಳಿಗೂ ಅವರು ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಅವರ ನಿಧನದ ನಂತರವೂ ಅವರ ಕಣ್ಣುಗಳು ಅನ್ಯರಿಗೆ ಬೆಳಕು ನೀಡಲಿವೆ. ತಮ್ಮ ದೇಹವನ್ನು ಕೂಡ ಅವರು ವೈದ್ಯಕೀಯ ಸಂಶೋಧನೆಗಾಗಿ ಎಮ್ಎಸ್ ರಾಮಯ್ಯ ಕಾಲೇಜಿಗೆ ಅವರು ದಾನ ಮಾಡಿದ್ದಾರೆ. ಕೆಪಿ ಪದ್ಮನಾಭ ಅವರು ಹೆಂಡತಿ ಶುಭಾ, ಮಕ್ಕಳಾದ ಸುಕೆನ್ ಮತ್ತು ಪ್ರಧಾನ್ ಪದ್ಮನಾಭ ಅವರನ್ನು ಅಗಲಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು ಮೆಟ್ರೋ ಸೇರಿದಂತೆ ಅನೇಕ ಭವ್ಯ ಕಟ್ಟಡಗಳನ್ನು ನಿರ್ಮಿಸಿ ಬೆಂಗಳೂರಿಗೆ ಅಂದ ತರುವಲ್ಲಿ ಶ್ರಮಿಸಿರುವ ಕೆಪಿ ಪದ್ಮನಾಭ ಅವರ ಹೆಸರನ್ನು ಬೆಂಗಳೂರು ಮೆಟ್ರೋದ ಒಂದು ನಿಲ್ದಾಣಕ್ಕಾದರೂ ಪದ್ಮನಾಭ ಅವರ ಹೆಸರಿಟ್ಟರೆ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ.