ದೇವೇಗೌಡ ಜನಾಂದೋಲನಕ್ಕೆ ಸಿದ್ದರಾಮಯ್ಯ ಕೊಕ್ಕೆ
ನಗಾರಿಗಳನ್ನು ಬಾರಿಸುವುದರ ಮುಖಾಂತರ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಆಂದೋಲನಕ್ಕೆ ಚಾಲನೆಯನ್ನು ನೀಡಿದರು. ಫ್ರೀಡಂ ಪಾರ್ಕಿನಿಂದ ಶುರುವಾಗಿ, ಶೇಷಾದ್ರಿ ರಸ್ತೆಯ ಮುಖಾಂತರ ಸಾಗಿ, ತುಮಕೂರು ರಸ್ತೆಯಲ್ಲಿರುವ ಡಾಬಸ್ ಪೇಟೆ ಮುಖಾಂತರ ತುಮಕೂರು ತಲುಪಲಿದೆ. ಮುಂದೆ ತುಮಕೂರಿನಿಂದ ಭದ್ರಾವತಿ ಮುಖಾಂತರ ಮೇ 9ರಂದು ಶಿವಮೊಗ್ಗ ತಲುಪಲಿದೆ. ಅಲ್ಲಿ ಮೇ 9ರಂದು ಬೃಹತ್ ಸಮಾವೇಶ ನಡೆಯಲಿದೆ. ಈ ಆಂದೋಲನ ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾತ್ರವಲ್ಲ, ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸಲು ಮತ್ತು ಅದರ ವಿರುದ್ಧ ಹೋರಾಡಲು ಜನರನ್ನು ಉತ್ತೇಜಿಸಲು ಹಮ್ಮಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ದೇವರಿಗೆ ಮಾತ್ರ ಹೆದರುವುದು : ಗೌಡ : ಸಾಗರೋಪಾದಿಯಲ್ಲಿ ಸೇರಿದ್ದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರು, ದೇಶವನ್ನು ಈ ದಯನೀಯ ಸ್ಥಿತಿಗೆ ತಂದವರೇ ರಾಜಕಾರಣಿಗಳು. ಇಂದು ಕಾರ್ಯಾಂಗ, ನ್ಯಾಯಾಂ ಮತ್ತು ಶಾಸಕಾಂಗ ಸರ್ವನಾಶವಾಗಿದೆ. ಏನೇನೂ ಉಳಿದಿಲ್ಲ. ಭ್ರಷ್ಟಾಚಾರವನ್ನು ಮೆಟ್ಟಿ ನಿಲ್ಲುವುದು ಜನರ ಶಕ್ತಿಯಿಂದ ಮಾತ್ರ ಸಾಧ್ಯ. ನಾನು ಈಗಲೂ ಗಟ್ಟಿಮುಟ್ಟಾಗಿದ್ದೇನೆ. ಆಗೋಗ್ಯ ಗಟ್ಟಿ ಇರುವವರೆಗೂ ಹೋರಾಟ ನಡೆಸುತ್ತಲೇ ಇರುತ್ತೇನೆ. ಯಾರಿಗೂ ಹೆದರುವುದಿಲ್ಲ. ಆದರೆ, ನಾನು ದೇವರಿಗೆ ಮಾತ್ರ ಹೆದರುವುದು. ಭ್ರಷ್ಟ ಬಿಜೆಪಿ ಸರಕಾರ ಬುಡಮೇಲು ಮಾಡುವವರೆಗೂ ವಿಶ್ರಮಿಸುವುದಿಲ್ಲ ಎಂದು ಘಂಟಾಘೋಷವಾಗಿ ಸಾರಿದರು.
ಜೆಡಿಎಸ್ ಚಳವಳಿಗೆ ಸಿದ್ದು ಅಪಸ್ವರ : ಜೆಡಿಎಸ್ ಆರಂಭಿಸಿರುವ ಚಳವಳಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ರಾಜ್ಯಸಭಾ ಚುನಾವಣೆಯಲ್ಲಿ ಕೆ. ಮರುಳಸಿದ್ದಪ್ಪನವರನ್ನು ಕಾಂಗ್ರೆಸ್ ನಿಲ್ಲಿಸಿದಾಗ, ಬೆಂಬಲ ನೀಡದ ಜೆಡಿಎಸ್ ಗೆ ನಾವೂ ಬೆಂಬಲ ನೀಡುವ ಸಾಧ್ಯತೆಯೇ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಖಾರವಾಗಿ ಪ್ರತಿಕ್ರಿಯಿಸಿದರು. ನಾಯಿಯಾದರೂ ಎಷ್ಟೋ ನಿಯತ್ತಿನಿಂದ ಕೂಡಿರುತ್ತದೆ ಎಂದು ವ್ಯಂಗ್ಯವಾಗಿ ಸಿದ್ದು ಹೇಳಿದರು.
ಆದರೆ, ಸಾಹಿತಿಗಳೇ ದೇವೇಗೌಡರ ಆಂದೋಲನಕ್ಕೆ ಬೆಂಬಲ ನೀಡುತ್ತಿರುವುದರ ಬಗ್ಗೆ, ಚುನಾವಣೆ ಇದ್ದಾಗ ಬೆಂಬಲ ನೀಡದಿರುವುದು, ಈಗ ಬೆಂಬಲ ಪಡೆಯುತ್ತಿರುವುದು ದೇವೇಗೌಡರ ಡಬಲ್ ಸ್ಟಾಂಡರ್ಡ್ ತೋರಿಸುತ್ತದೆ. ಸಾಹಿತಿಗಳ ಬಗ್ಗೆ ಹೇಳುವಂತಹುದ್ದೇನೂ ಇಲ್ಲ. ಬೆಂಬಲಿಸುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ಸಿದ್ದರಾಮಯ್ಯ ಮುಗುಮ್ಮಾಗಿ ನುಡಿದರು. ಮೇ 9ರಂದು ಪ್ರತ್ಯೇಕವಾಗಿ ಆಂದೋಲನವನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ನಡೆಸಲಿದೆ.
ಮೈಸೂರಿನಲ್ಲಿ ಪ್ರತಿಭಟನೆ : ಬಸವ ಜಯಂತಿಯಂದು ಯಡಿಯೂರಪ್ಪ ಮೈಸೂರಿಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಇಂದು ಜೆಡಿಎಸ್ ನ ಬಣ ಯಡಿಯೂರಪ್ಪ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧಸಿರಿದೆ. ಜೆಡಿಎಸ್ ಜಿಲ್ಲಾಧ್ಯಕ್ಷರಾಗಿರುವ ಎಂಎಲ್ಸಿ ಚಿಕ್ಕಮಾದು ಅವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಜಯಪ್ರಕಾಶ ನಾರಾಯಣ ವೇದಿಕೆ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಮೇ 5ರಂದು ಮೈಸೂರಿಗೆ ಬರಬೇಕಾಗಿದ್ದ ಅಣ್ಣಾ ಹಜಾರೆ ಅವರ ಚಳವಳಿಯ ಮಾದರಿಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಅವರು ನುಡಿದರು.