ವಿಕೃತಕಾಮಿ ಜೈಶಂಕರ್ ಹಿಡಿದ ಪೊಲೀಸರಿಗೆ ಬಹುಮಾನ
ಬೆಂಗಳೂರು ಗ್ರಾಮಾಂತರ, ಬಿಜಾಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮತ್ತಿತರ ಜಿಲ್ಲೆಗಳಲ್ಲಿ ಮಹಿಳೆಯರಿಗೆ ದುಃಸ್ವಪ್ನವಾಗಿ ಕಾಡಿದ್ದ ಜೈಶಂಕರ್ ನನ್ನು ಬಿಜಾಪುರದಲ್ಲಿ ಝುಳಕಿ ಪೊಲೀಸರು ಬಂಧಿಸಿದ್ದರು, ನಂತರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಾರಿಕಣಿವೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಆತ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಇಂದು ಚಿತ್ರದುರ್ಗದಲ್ಲಿ ನ್ಯಾಯಾಲಯಕ್ಕೆ ಅವನನ್ನು ಹಾಜರುಪಡಿಸಲಾಗುತ್ತಿದೆ.
ತಮಿಳುನಾಡು ಮೂಲದ ಜೈಶಂಕರ್ ಅಲ್ಲಿ 19 ಕೊಲೆ ಮಾಡಿ ಬಂಧಿತನಾಗಿದ್ದ, ನಂತರ ಕೊಯಮತ್ತೂರು ಸೆಂಟ್ರಲ್ ಜೈಲಿನಿಂದ ಸೇಲಂ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಕರೆದೊಯ್ಯುತ್ತಿದ್ದಾಗ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಅಲ್ಲಿಂದ ಅವನ ಕ್ರೈಂ ಆಪರೇಷನ್ ಕರ್ನಾಟಕದಲ್ಲಿ ಪ್ರಾರಂಭವಾಗಿತ್ತು. ಚಿತ್ರದುರ್ಗ ಮತ್ತು ತುಮಕೂರಿನಲ್ಲಿ 8 ಮಹಿಳೆಯರು ಅವನಿಗೆ ಬಲಿಯಾಗಿದ್ದರು.
ಗಂಡನ ಎದುರಿಗೇ ಹೆಂಡತಿಯನ್ನು ಅತ್ಯಾಚಾರ ಮಾಡಿ ಕೊಲೆಗೈಯುತ್ತಿದ್ದ ವಿಕೃತಕಾಮಿ ಜೈಶಂಕರ್. ಚಿತ್ರದುರ್ಗದ ರಂಗಸ್ವಾಮಿ ಎಂಬುವವರ ಹೆಂಡತಿಯನ್ನು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ತೋಟ ಕಾಯುತ್ತಿದ್ದ ಮಹಿಳೆಯನ್ನು ಆಕೆಯ ಗಂಡನ ಎದುರಿಗೇ ಹತ್ಯೆಗೈದಿದ್ದ. ಮಹಿಳೆಯ ಮೇಲೆ ಬಲಾತ್ಕಾರ ಮಾಡಿ ಹಿಂಸಿಸಿ ವಿಕೃತ ಆನಂದ ಪಡೆಯುತ್ತಿದ್ದ. ಈತನ ಬಂಧನದಿಂದ ಮಹಿಳೆಯರಿಗೆ ವರ್ಣಿಸಲಾರದ ನಿರಾಳತೆ ಮೂಡಿದೆ.