ಮೈಸೂರು-ಬೆಂಗಳೂರು ಕಾರಿಡಾರ್: ಯಡ್ಡಿ ಗಡಿಬಿಡಿ
ಕೆಲ ದಿನಗಳ ಹಿಂದೆ, ಭೂಸ್ವಾಧೀನ ಪ್ರಕ್ರಿಯೆ ನಿಧಾನವಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಯಡಿಯೂರಪ್ಪ ನರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತದೆ ಎಂದು ಹೆದರಿ ಭೂಸ್ವಾಧೀನ ವಶಪಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಯಡಿಯೂರಪ್ಪ ಸರಕಾರಕ್ಕೆ ಅಧಿಕಾರ ಚಲಾಯಿಸುವ ಯಾವುದೇ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಸರಕಾರವನ್ನು ವಾಚಾಮಗೋಚರವಾಗಿ ಉಗಿದಿತ್ತು.[ಓದಿ: ಸರಕಾರ ಕೋಮಾದಲ್ಲಿದೆ ]
ಬಸವ ಜಯಂತಿ ಆಚರಣೆಯ ನಿಮಿತ್ತ ಮೈಸೂರಿಗೆ ಆಗಮಿಸಿರುವ ಯಡಿಯೂರಪ್ಪ ಲಲಿತ್ ಮಹಲ್ ಪ್ಯಾಲೇಸ್ ಹೊಟೇಲ್ ನ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡುತ್ತಿದ್ದರು. ರಾಜ್ಯ ಸರಕಾರವು ಕೃಷಿಕರಿಗೆ ಭೂಸ್ವಾಧೀನಕ್ಕೆ ನೀಡುವ ಪರಿಹಾರ ಧನವನ್ನು ಒಂದು ಎಕರೆಗೆ 41 ಲಕ್ಷ ರೂ.ಗೆ ಹೆಚ್ಚಿಸಿರುವುದನ್ನು ಮುಖ್ಯಮಂತ್ರಿ ಸಮರ್ಥಿಸಿಕೊಂಡರು.
ಕೃಷಿಕರಿಗೆ ಪರಿಹಾರ ಧನ ಮಾತ್ರ ಹೆಚ್ಚಿಸಿರುವುದಲ್ಲದೇ ಅವರಿಗೆ ರೆಸಿಡೆನ್ಶಿಯಲ್ ಸೈಟ್ ಕೂಡ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು. ಯಾರ ಭೂಮಿಯನ್ನು ಸ್ವಾಧೀನಪಡಿಸಲಾಗಿದೆಯೋ ಅವರಿಗೆ ಸೈಟ್ ಗಳನ್ನು ಕಾದಿರಿಸುವ ಕುರಿತು ನೈಸ್ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಮತ್ತು ಬಿಎಂಐಸಿ ಗುತ್ತಿಗೆದಾರರೊಂದಿಗೆ ಚರ್ಚಿಸಲಾಗಿದೆ ಎಂದು ಅವರು ನುಡಿದರು.
ಹೆಲಿಕಾಪ್ಟರ್ ಪ್ರಯಾಣ ಅನಿವಾರ್ಯ: ಅರುಣಾಚಲ ಮುಖ್ಯಮಂತ್ರಿ ಖಂಡು ಮತ್ತು ಆಂಧ್ರದ ಮುಖ್ಯಮಂತ್ರಿ ವೈಎಸ್ಆರ್ ರೆಡ್ಡಿ ಅವರು ಹೆಲಿಕಾಪ್ಟರ್ ದುರಂತ ಕಂಡಿರುವುದರಿಂದ ಕಾಪ್ಟರ್ ಪ್ರಯಾಣ ಮಾಡದಿರುವಿರ ಎಂಬ ಪ್ರಶ್ನೆಗೆ "ಸದ್ಯದ ಬಿಗಿ ಶೆಡ್ಯೂಲ್ ನಲ್ಲಿ ಹೆಲಿಕಾಪ್ಟರ್ ಪ್ರಯಾಣ ಅನಿವಾರ್ಯ" ಎಂದು ಹೇಳಿದರು.
ಜೆಡಿಎಸ್ ಆರಂಭಿಸಿದ ಜನಾಂದೋಲನಕ್ಕೆ ಅವರು ಹೆಚ್ಚು ಪ್ರಾಮುಖ್ಯತೆ ನೀಡಲಿಲ್ಲ. "ಪ್ರಜಾಪ್ರಭುತ್ವ ಇರುವ ರಾಷ್ಟ್ರದಲ್ಲಿ ಪ್ರತಿಭಟನೆ ಮತ್ತು ಹೋರಾಟ ಮಾಡಲು ಎಲ್ಲರಿಗೂ ಹಕ್ಕಿದೆ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ರಾಜ್ಯದಲ್ಲಿ ಶುಕ್ರವಾರ ಮತ್ತು ಶನಿವಾರ ಮಾತ್ರ ಪ್ರವಾಸ ಮಾಡಲಾಗುವುದು ಎಂದು ಹೇಳಿದ ಅವರು ಬಸವ ಜಯಂತಿ ಉದ್ಘಾಟಿಸಲು ಕಲಾಮಂದಿರಕ್ಕೆ ತೆರಳಿದರು.