ಕೊನೆಗೂ ಸೆರೆ ಸಿಕ್ಕ ರೇಪಿಸ್ಟ್ ಸೈಕೋ ಕಿಲ್ಲರ್- ಜೈಶಂಕರ್
ಈತನನ್ನು ಚಿತ್ರದುರ್ಗಕ್ಕೆ ಕರೆದೊಯ್ಯಲಾಗುತ್ತದೆ ಎಂದು ತಿಳಿಯುತ್ತಿದಂತೆ ಜನ ಸೇರತೊಡಗಿದರು. ಆದರೆ ಇದರಿಂದ ವಿಚಾರಣೆಗೆ ತೊಂದರೆಯಾಗುತ್ತೆ ಎಂದು ತಿಳಿದ ಪೋಲಿಸರು ಆತನನ್ನು ಹೆಚ್ಚಿನ ವಿಚಾರಣೆಗಾಗಿ ಮಾರಿಕಣಿವೆ ಫಾರೆಸ್ಟ್ ಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈತ ಬೆಂಗಳೂರು ಗ್ರಾಮಾಂತರ, ಬಿಜಾಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಹಾಡುಹಗಲೇ ಒಂಟಿ ಮಹಿಳೆಯರನ್ನು ಅತ್ಯಾಚಾರವೆಸಗಿ ಕೊಲೆ ಮಾಡುತ್ತಿದ್ದ. ಈತನ ವಿರುದ್ಧ ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬಿಜಾಪುರ ಪೋಲಿಸರು ಚಾಣಾಕ್ಷ್ಯದಿಂದ ಬಲೆ ಬೀಸಿ ಕೊನೆಗೂ ಈತನನ್ನು ಬಂಧಿಸುವಲ್ಲಿ ಸಫಲರಾಗಿದ್ದು ರಾಜ್ಯದ ಜನತೆ ನೆಮ್ಮದಿಯ ಉಸಿರು ಬಿಡುವಂತಾಗಿದೆ.
ಈತ ಹೆಚ್ಚಿನ ಪ್ರಕರಣಗಳಲ್ಲಿ ಪತಿಯ ಎದುರೇ ಪತ್ನಿಯ ಕೊಲೆ ಮಾಡುತ್ತಿದ್ದ. ಚಿತ್ರದುರ್ಗದಲ್ಲಿ ಇಂತಹ ಅನೇಕ ಕೊಲೆಗಳು ಪೋಲಿಸರ ಗಮನಕ್ಕೆ ಬಂದಿವೆ. ಈತನ ಭಯದಲ್ಲಿ ದಂಪತಿಗಳು, ಒಂಟಿ ಮಹಿಳೆಯರು ಮನೆಯಲ್ಲಿರಲು ಭಯಪಡುತ್ತಿದ್ದರು. ಚಿತ್ರದುರ್ಗ ಜಿಲ್ಲೆಯ ರಂಗಸ್ವಾಮಿ ಎಂಬವರ ಪತ್ನಿಯನ್ನು ಆಕೆಯ ಪತಿಯ ಎದುರೇ ಕೊಲೆ ಮಾಡಿದ್ದ. ಬೆಂಗಳೂರು ನೆಲಮಂಗಳದಲ್ಲಿ ತೋಟಕಾಯುತ್ತಿದ್ದ ಮಹಿಳೆಯೊಬ್ಬಳನ್ನೂ ಕೂಡ ಆಕೆಯ ಪತಿಯ ಎದುರೇ ಕೊಲೆ ಮಾಡಿದ್ದ.
ಎಲ್ಲಿಂದ ಬಂದವ: ತಮಿಳುನಾಡಿನಲ್ಲಿ 19 ಕೊಲೆ ಮಾಡಿ ಪೋಲಿಸರಿಂದ ಬಂಧಿಸಲ್ಪಟ್ಟಿದ್ದ. ಆದರೆ ಆತನನ್ನು ಕೊಯಮತ್ತೂರು ಸೆಂಟ್ರಲ್ ಜೈಲಿನಿಂದ ಸೇಲಂ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಕರೆದೊಯ್ಯುತ್ತಿದ್ದಾಗ ಪೋಲಿಸರ ಕಸ್ಟಡಿಯಿಂದ ಈ ವರ್ಷದ ಮಾರ್ಚ್ 18ರಂದು ತಪ್ಪಿಸಿಕೊಂಡಿದ್ದ. ತುಮಕೂರು ಮತ್ತು ಚಿತ್ರದುರ್ಗದಲ್ಲಿ ಈ ಸೈಕೋಪಾತ್ ಗೆ ಸುಮಾರು 8 ಜನರು ಬಲಿಯಾಗಿದ್ದರು.