ಯಡಿಯೂರಪ್ಪ ಸರಕಾರ ಕೋಮಾದಲ್ಲಿದೆ : ಸುಪ್ರೀಂ ಕೋರ್ಟ್
ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಹೂಡಲಾಗಿರುವ ಕೇಸಿನ ವಿಚಾರಣೆಯಲ್ಲಿ ಮೇಲಿನಂತೆ ಸರ್ವೋಚ್ಚ ನ್ಯಾಯಾಲಯ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತದೆ ಎಂಬ ಕಾರಣದಿಂದ ಭೂಸ್ವಾಧೀನ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ರಾಜ್ಯ ಸರಕಾರ ತನ್ನ ವಿಚಾರ ಮಂಡಿಸಿತ್ತು.
"ಯಾಕೆ ಭೂಸ್ವಾಧೀನ ಪಡಿಸಿಕೊಳ್ಳುತ್ತಿಲ್ಲ? ಕಾನೂನು ಸುವ್ಯವಸ್ಥೆ ತೊಂದರೆಯಾದರೂ ಎಲ್ಲಿದೆ? ಹೆದರಿಕೊಂಡು ಕುಳಿತುಕೊಳ್ಳುವವರಾದರೆ ಅಧಿಕಾರ ಬಿಟ್ಟು ತೊಗಲಿ" ಎಂದು ನ್ಯಾಯಮೂರ್ತಿಗಳಾದ ವಿಎಸ್ ಸಿರಪುರಕರ, ಆರ್ಎಮ್ ಲೋಧಾ ಮತ್ತು ಟಿಎಸ್ ಠಾಕೂರ್ ಅವರಿದ್ದ ವಿಭಾಗೀಯ ಪೀಠ ಯಡಿಯೂರಪ್ಪ ಸರಕಾರದ ಬೆವರಿಳಿಸಿದೆ. ಇದಕ್ಕೆ ನ್ಯಾಯಾಲಯದಿಂದ ಮಂಗಳಾರತಿ ಮಾಡಿಸಿಕೊಂಡಿರುವ ಯಡಿಯೂರಪ್ಪ ಅವರ ಸರಕಾರದ ಉತ್ತರವೇನು?
ಬೆಂಗಳೂರು ಮತ್ತು ಮೈಸೂರು ನಡುವಿನ ಪಯಣದ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಐದು ಸೆಟಲೈಟ್ ಟೌನ್ ಶಿಪ್ ಇರುವ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಆದರೆ, ಕೆಲ ಪ್ರಕರಣಗಳನ್ನು ದಾಖಲಿಸಿರುವುದರಿಂದ ಬಿಎಂಐಸಿ ಯೋಜನೆ ಕುಂಟುತ್ತ ಸಾಗಿದೆ. ರಾಜ್ಯ ಸರಕಾರವನ್ನು ರಾಜ್ಯ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಹಳ್ಳಿಯವರು ಪ್ರತಿನಿಧಿಸುತ್ತಿದ್ದಾರೆ.
ಭೂಸ್ವಾಧೀನಪಡಿಸಿಕೊಳ್ಳಲು ಗುಂಡಿಗೆಯನ್ನೇ ಕಳೆದುಕೊಂಡಿದ್ದೀರಿ, ಇನ್ನು ಅಧಿಕಾರದಲ್ಲಿ ಯಾಕೆ ಕೂಡುತ್ತೀರಿ ಎಂದು ಸುಪ್ರೀಂ ಕೋರ್ಟ್ ತರಾಮರಿ ಬೈದಿರುವುದರಿಂದ, ಯಡಿಯೂರಪ್ಪ ಸರಕಾರ ಕಿತ್ತೊಗೆಯಲು ಪಕ್ಷಾತೀತ ಹೋರಾಟಕ್ಕೆ ಮುಂದಾಗಿರುವ 79ರ ಹರೆಯದ ಮಾಜಿ ಪ್ರಧಾನಿ ದೇವೇಗೌಡರಿಗೆ ಆನೆ ಬಲ ಬಂದಂತಾಗಿದೆ. ಕುಮಾರಸ್ವಾಮಿ ಕೂಡ ಯಡಿಯೂರಪ್ಪನವರ ಒಂದೊಂದೇ ಹಗರಣಗಳನ್ನು ಬಯಲಿಗೆಳೆಯುತ್ತಿದ್ದಾರೆ.