ಯುಪಿಎ ವಿರುದ್ಧ ಸಿಡಿದೆದ್ದ ಬಳ್ಳಾರಿ ಸಹೋದರಿಯರು
ಬಿಜೆಪಿಯ ಮಹಿಳಾ ಘಟಕದ 50ಕ್ಕೂ ಹೆಚ್ಚಿನ ಸಂಖ್ಯೆಯ ಸದಸ್ಯರು ಈ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈ ಕಾರ್ಯಕರ್ತರು ಮನೆ ಮನೆಯ ಬಾಗಿಲಲ್ಲಿ ಹಂಚುತ್ತಿರುವ ಕರಪತ್ರದಲ್ಲಿ, ಕೇಂದ್ರ ಸರ್ಕಾರದ 2ಜಿ ಸ್ಪೆಕ್ಟ್ರಮ್, ಸುರೇಶ್ ಕಲ್ಮಾಡಿ ನೇತೃತ್ವದಲ್ಲಿ ಕಾಮನ್ವೆಲ್ತ್ ಹಗರಣ, ಹಸನ್ ಹಲಿಯ ಹವಾಲಾ ವ್ಯವಹಾರ ಸೇರಿ ಇನ್ನಿತರೆಗಳು ವಿಚಾರಗಳು ಪ್ರಸ್ತಾಪವಾಗಿವೆ.
ಆದರ್ಶ ಸೊಸೈಟಿ ಹಗರಣ, ಆಹಾರ ಪದಾರ್ಥಗಳ ಬೆಲೆ ಏರಿಕೆ, ಜನಸಾಮಾನ್ಯರ ಬದುಕಿನ ಮೇಲೆ ಕೇಂದ್ರ ಸರ್ಕಾರ ವಿಧಿಸುತ್ತಿರುವ ಪರೋಕ್ಷ ತೆರಿಗೆಗಳು, ಸಿಬಿಐ ತನಿಖಾ ಸಂಸ್ಥೆಯನ್ನು ಸ್ವಾರ್ಥಕ್ಕಾಗಿ ಬಳಕೆ ಮಾಡುತ್ತಿರುವ ಕುರಿತು, ಅಕ್ಕಿ ರಪ್ತು ಹಗರಣ ಇನ್ನಿತರೆ ಆರ್ಥಿಕ ನೀತಿಗಳ ಕುರಿತು ಬಿಜೆಪಿ ಈ ಕರಪತ್ರದಲ್ಲಿ ತನ್ನ ನಿಲುವುಗಳನ್ನು ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಬೇರುಮಟ್ಟದ ಕೆಲಸಕ್ಕೆ ಮುಂದಾಗಿದ್ದು, ಭವಿಷ್ಯದ ಚುನಾವಣೆಗಳಿಗಾಗಿ ಪಕ್ಷವನ್ನು - ಮತದಾರರನ್ನು ಒಗ್ಗೂಡಿಸುವ ರಹಸ್ಯ ಕಾರ್ಯಸೂಚಿಯನ್ನು ಜಾರಿ ಮಾಡಿದೆ.
ಕಾಂಗ್ರೆಸ್ ಪಕ್ಷದ ಇತಿಹಾಸ, ಹಗರಣಗಳ ಸರಮಾಲೆ, ಕಾಂಗ್ರೆಸ್ನಿಂದ ರಾಷ್ಟ್ರ - ರಾಜ್ಯ ಸಾಧಿಸಿದ ಅಭಿವೃದ್ಧಿ, ಕಾಂಗ್ರೆಸ್ನ ಮಹಿಳಾ ವಿರೋಧಿ ನಿಲುವು, ಬಡ - ನಿರ್ಗತಿಕ, ದಲಿತ - ರೈತ - ಕೂಲಿಗಳ ವಿರೋಧಿ ನೀತಿ - ನಿಲುವುಗಳ ಕುರಿತು ಈ ಕರಪತ್ರದಲ್ಲಿ ಸೂಕ್ಷ್ಮವಾಗಿ ವಿಷಯ ಪ್ರಸ್ತಾಪಿಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಮತದಾರರು ಶಾಶ್ವತವಾಗಿ ಮರೆಯಬೇಕು ಎಂದು ಕರೆ ನೀಡುತ್ತಿದೆ.
ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾಬಾಯಿ, ಉಪ ಮೇಯರ್ ಶಶಿಕಲಾ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ವಾರ್ಡ್, ಹೋಬಳಿ, ವೃತ್ತ, ಬೂತ್ ಮಟ್ಟದಲ್ಲಿ ಮತದಾರರನ್ನು ಜಾಗೃತಿಗೊಳಿಸುವ ಕಾರ್ಯವನ್ನು ಪಕ್ಷ ಮಾಡುತ್ತಿದೆ. ಮಹಿಳೆಯರು ಆತ್ಮೀಯವಾಗಿ ಎಲ್ಲರೊಂದಿಗೆ ಬೆರೆದು ಪಕ್ಷದತ್ತ ಸೆಳೆಯುತ್ತಿದ್ದೇವೆ. ಪಕ್ಷಕ್ಕೆ ಯುವ ಶಕ್ತಿಯನ್ನು ಆಹ್ವಾನಿಸುತ್ತಿದ್ದೇವೆ ಎಂದು ತಿಳಿಸಿದರು. ಮಹಿಳಾ ಬಿಜೆಪಿ ಮುಖಂಡೆ, ನ್ಯಾಯವಾದಿ ಸಾಧನಾ ಹಿರೇಮಠ ಅವರು, ಬಳ್ಳಾರಿ ನಗರ ಶಾಸಕ, ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರರೆಡ್ಡಿ ಅವರ ಮನೆಯಿಂದ ಪ್ರಾರಂಭವಾದ ಈ ಯೋಜನೆ, ಇಡೀ ಕ್ಷೇತ್ರದಲ್ಲಿ ಉತ್ತಮ ಜನಸ್ಪಂದನೆ ಪಡೆದಿದೆ.