ಬಿಜೆಪಿ ಮುಸ್ಲಿಂ ವಿರೋಧಿಯಲ್ಲ: ಮುಮ್ತಾಜ್ ಆಲಿ ಖಾನ್
ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಹಜ್ ಭವನ ಕಟ್ಟಡಕ್ಕೆ ಅಂದಾಜು 40 ಕೋಟಿ ರೂಪಾಯಿ ವೆಚ್ಚವಾಗಲಿದ್ದು ಸರಕಾರ ಈಗಾಗಲೇ 18.5 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ಮುಂದಿನ ಹದಿನೈದು ದಿನಗಳಲ್ಲಿ ಬೆಂಗಳೂರಿನಲ್ಲಿ ನೂತನ ಹಜ್ ಭವನಕ್ಕೆ ಅಡಿಗಲ್ಲು ಹಾಕಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮುಸ್ಲಿಂರಲ್ಲಿ ಬಿಜೆಪಿ ಕುರಿತು ಕೆಟ್ಟ ಚಿತ್ರಣ ಮೂಡಿಸಲಾಗಿದೆ ಎಂದ ಅವರು ಪ್ರಸಕ್ತ ಬಜೆಟ್ ನಲ್ಲಿ ಸಮುದಾಯಕ್ಕೆ ಸುಮಾರು 120 ಕೋಟಿ ರೂ. ನೀಡಲಾಗಿದೆ ಎಂದರು. ಇದನ್ನು ಹಜ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವಾಲಯವು ಸಮರ್ಥವಾಗಿ ವಿನಿಯೋಗ ಮಾಡಲಿದೆ ಎಂದು ಹೇಳಿದ್ದಾರೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಮಟ್ಟದಲ್ಲಿ ಅಲ್ಪಸಂಖ್ಯಾತರನ್ನು ಮೇಲೆ ತರುವುದು ತಮ್ಮ ಪ್ರಾಥಮಿಕ ಆದ್ಯತೆಯಾಗಿದೆ ಎಂದರು.
ಪ್ರಮುಖ ಕೃತಿಗಳ ಅನುವಾದಕ್ಕಾಗಿ ಉರ್ದು ಅಕಾಡಮಿಗೆ ಹಣಕಾಸು ನೆರವು ನೀಡಲಾಗಿದೆ. ವ್ಯಾಧಿಗಳಿಂದ ಬಳಲುತ್ತಿದ್ದವರಿಗೆ ಸುಮಾರು ಒಂದು ಲಕ್ಷದಷ್ಟು ಹಣಕಾಸು ನೆರವನ್ನು ಕಳೆದ ತಿಂಗಳು ನೀಡಲಾಗಿದೆ. ಇದರೊಂದಿಗೆ ಮಸೀದಿಗಳಲ್ಲಿ ಕಾರ್ಯ ನಿರ್ವಹಿಸುವ ಇಮಾಮರಿಗೆ ನೀಡುವ ಸಂಭಾವನೆಯನ್ನು 3 ಸಾವಿರಕ್ಕೆ ಹೆಚ್ಚಿಸಲಾಗಿದೆ. ರಮ್ಜಾನ್ ಸಮಯದಲ್ಲಿ ಕುರಾನ್ ಓದುವವರಿಗೆ 2,800 ರೂ. ಸಂಭಾವನೆ ನೀಡಲಾಗುತ್ತಿದೆ. ಇಮಾಮರಿಗೆ ಉತ್ತಮ ವೈದ್ಯಕೀಯ ನೆರವು ಕೂಡ ನೀಡಲಾಗುತ್ತಿದೆ ಎಂದರು.
ನವದೆಹಲಿಯಲ್ಲಿ ಐಎಎಸ್ ಮತ್ತು ಐಪಿಎಸ್ ಕೋಚಿಂಗ್ ಪಡೆಯುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗೆ ಸುಮಾರು ಒಂದು ಲಕ್ಷ ರೂ. ವಿನಿಯೋಗ ಮಾಡಲಾಗುತ್ತಿದೆ. ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯುವರಿಗಾಗಿ ಸುಮಾರು 3 ಕೋಟಿ ರೂ. ಕಾದಿರಿಸಲಾಗಿದೆ ಎಂದು ಅವರು ಹೇಳಿದ್ದಾರೆ.